ನವದೆಹಲಿ: ಕಳೆದ ವರ್ಷ ಮಾರ್ಚ್ 22ರಂದು ದೇಶದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿದ್ದನ್ನು ಪ್ರಧಾನಿ ಮೋದಿಯವರು ಸ್ಮರಿಸಿದ್ದು, ಇದು ಇಡೀ ಜಗತ್ತಿಗೆ ಸ್ಫೂರ್ತಿಯಾಯ್ತು ಎಂದು ಹೇಳಿದ್ದಾರೆ.
ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 75ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಕಳೆದ ವರ್ಷ ಮಾರ್ಚ್ನಲ್ಲಿ ನಾವು ಮೊದಲ ಬಾರಿಗೆ ಜನತಾ ಕರ್ಫ್ಯೂ ಎಂಬ ಪದವನ್ನು ಕೇಳಿದೆವು. ಭಾರತದ ಜನರು ಆರಂಭದಲ್ಲೇ ಕೊರೊನಾ ವಿರುದ್ಧ ಉತ್ಸಾಹಭರಿತರಾಗಿ ಹೋರಾಟ ನಡೆಸಿದರು. ನಂತರದಲ್ಲಿ ಜನತಾ ಕರ್ಫ್ಯೂ ಇಡೀ ಜಗತ್ತಿಗೆ ಒಂದು ಸ್ಫೂರ್ತಿಯಾಯ್ತು. ಶಿಸ್ತಿಗೆ ಒಂದು ಉತ್ತಮ ಉದಾಹರಣೆಯಾಯಿತು ಎಂದರು.
ಅಲ್ಲದೆ ಪಾತ್ರೆಗಳನ್ನು ಬಡಿದು, ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಾರಿಯರ್ಸ್ಗೆ ಗೌರವಿಸಿದ್ದನ್ನ ವಿಶ್ವವು ವ್ಯಾಪಕವಾಗಿ ಪ್ರಶಂಸಿಸಿತು ಎಂದು ಹೇಳಿದರು.
ಕಳೆದ ವರ್ಷ ಈ ಹೊತ್ತಿಗೆ, ಕೊರೊನಾ ಲಸಿಕೆ ಸಿಗುತ್ತಾ? ಅದನ್ನು ಯಾವಾಗ ಹೊರತರಲಾಗುತ್ತದೆ? ಎಂಬ ಪ್ರಶ್ನೆ ಇತ್ತು. ಇಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ ಎಂದು ಮೋದಿ ಹೇಳಿದರು.