ಟೆಕ್ನಾಲಜಿ ಬದಲಾದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಕೈಯಲ್ಲೇ ಹಣವಿಟ್ಟು ವ್ಯವಹಾರ ನಡೆಸುತ್ತಿದ್ದ ಕಾಲವಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಪ್ರತಿ ವ್ಯವಹಾರಕ್ಕೂ ಗೂಗಲ್ ಪೇ, ಫೋನ್ ಪೇಗೆ ಜನರು ಅವಲಂಬಿತರಾಗಿದ್ದಾರೆ. ಮೊಬೈಲ್ನಲ್ಲೇ ವ್ಯವಹಾರ ನಡೆಯುತ್ತಿರುವ ಕಾರಣ ದೇವಸ್ಥಾನಕ್ಕೆ ಬರುವವರು ಕಾಣಿಕೆ ತಂದಿರಲ್ಲ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲೀಕರಣವನ್ನು ಜಾರಿಗೊಳಿಸಿದ್ದರು. ಸದ್ಯ ಮೋದಿಯ ಈ ಕ್ಯಾಶ್ಲೆಸ್ನ ಕನಸನ್ನು ತುಮಕೂರಿನ ದೇವಾಲಯ ಮಂಡಳಿ ನನಸು ಮಾಡಿದೆ.
ತುಮಕೂರಿನ ದೇವರಾಯನದುರ್ಗದ ಭೋಗ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಹುಂಡಿ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಯ ಡಿಜಿಟಲಿಕರಣವನ್ನು ದೇವಾಲಯ ಮಂಡಳಿ ಚಾಲ್ತಿಗೊಳಿಸಿದೆ.
ಕಾಣಿಕೆಯ ಹುಂಡಿಯ ಜೊತೆಗೆ ದೇವಾಲಯದಲ್ಲಿ ಇ – ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರೆ ಸೌಲಭ್ಯ ಲಭ್ಯವಿದೆ. ಇನ್ನು ಭಕ್ತರು ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾತನಾಡಿ, ಬೆಂಗಳೂರು, ಮೈಸೂರು ಸೇರಿ ಇತರೆ ಕಡೆಗಳಿಂದ ಬರುವವರು ಹಣ ತರುವುದಕ್ಕೆ ಆಗಲ್ಲ. ಅಂತಹವರ ಅನುಕೂಲಕ್ಕಾಗಿ ಈ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದೆ ಇನ್ನು ಮುಂದೆ ದೇವಾಲಯದಲ್ಲಿ ಹುಂಡಿಗಳಿಗೆ ಹಾಕಲು ಭಕ್ತರು ಚಿಲ್ಲರೆಗಾಗಿ ಪರದಾಡುವ ಅಗತ್ಯವಿಲ್ಲ ಎಂದರು.