ಮಾಧ್ಯಮದವರ ಸಮ್ಮುಖದಲ್ಲೆ ಎಲ್ಲವೂ ನಡೆದು ಇತ್ಯರ್ಥವಾಗಲಿ
ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಸ್ಪಷ್ಟನೆಗೆ ಸುಧೀರ್ ಪತ್ರಿಕಾ ಪ್ರಕಟಣೆ
ಸುಳ್ಯ: ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡ ವಿಚಾರದಲ್ಲಿ “ನನ್ನ ವಿರೋಧ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜಕೀಯವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರನ್ನು ಪಣೋಲಿಬೈಲು ಸತ್ಯದೇವತೆ ನೋಡಿಕೊಳ್ಳಲಿ” ಎಂದು ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ, ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ರವರು ಕಾರಣಿಕ ಕ್ಷೇತ್ರ ಪಣೋಲಿಬೈಲು ಮೊರೆ ಹೋಗಿದ್ದಾರೆ.
ಇದಕ್ಕೆ ಮಹಿಳೆಯ ಪತಿ ಸುಧೀರ್ ಪ್ರತಿಕ್ರಿಯೆ ನೀಡಿದ್ದು, ಆತ ಪಣೋಲಿಬೈಲು ಸತ್ಯದೇವತೆಯ ನಡೆಯಲ್ಲಿ ಸತ್ಯ ವಿಚಾರ ಹೇಳಿ ಬಂದಿದ್ದೇನೆಂದು ಪತ್ರಿಕಾ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿರುವುದನ್ನು ನಾನು ಓದಿರುತ್ತೇನೆ. ಹರಿಪ್ರಸಾದ್ ಯಾದವ್ ಪಣೋಲಿಬೈಲ್ ಗೆ ಹೋಗುವಾಗ ನನ್ನನ್ನು ಕರೆಯಬೇಕಿತ್ತು ಒಬ್ಬನೇ ಹೋಗಿ ಪ್ರಾರ್ಥನೆ ಮಾಡಿ ಬರುವುದಲ್ಲ, ಅವನು ದಿನಾಂಕ ನಿಗದಿ ಪಡಿಸಲಿ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಅಥವಾ ಶ್ರೀ ಕ್ಷೇತ್ರ ಕಾನತ್ತೂರುಗೆ ನಾನು ಬರುತ್ತೇನೆ.
ಆ ಎರಡು ಕ್ಷೇತ್ರದ ನಡೆಯಲ್ಲಿ ನಿಂತು ಹೇಳಲಿ ನನ್ನ ಸಂಸಾರದಲ್ಲಿ ಸುಮಾರು ಒಂದೂವರೆ ವರ್ಷದಿಂದ ಏನೇನು ಮಾಡಿದ್ದಾನೆ ನನ್ನ ಹೆಂಡತಿಯನ್ನು ನನ್ನಿಂದ ಬೇರ್ಪಡಿಸಿ ನನ್ನ ಹೆಂಡತಿಯನ್ನು ಅನೈತಿಕ ಚಟುವಟಿಕೆಗೆ ಬಳಸಿದ್ದಾನೆ ಎಂದು ಇಂಚಿಂಚು ನಾನು ಅಲ್ಲಿ ಬಂದು ಹೇಳುತ್ತೇನೆ. ನನ್ನ ಎಲ್ಲಾ ಮಾಧ್ಯಮ ಮಿತ್ರರ ಸಮ್ಮುಖದಲ್ಲೇ ಕ್ಷೇತ್ರದಲ್ಲಿ ಹೇಳುತ್ತೇನೆ. ಹರಿಪ್ರಸಾದ್ ಯಾದವ್ ದಿನಾಂಕ ನಿಗದಿ ಪಡಿಸಲಿ ಎಂದು ಸುಧೀರ್ ಪ್ರತ್ಯುತ್ತರ ನೀಡಿದ್ದಾರೆ.
ನನಗೂ ನನ್ನ ಪತ್ನಿಗೂ ವಿಚ್ಚೇದನವಾಗಿಲ್ಲ ಕಾಸರಗೋಡು ಕೋರ್ಟ್ ನಲ್ಲಿ ಕೇಸ್ ಇದೆ. ಇದನ್ನೇ ನೆಪ ಮಾಡಿಕೊಂಡ ಹರಿಪ್ರಸಾದ್ ಯಾದವ್ ನನ್ನ ಪತ್ನಿಯನ್ನು ಸುಮಾರು ಒಂದೂವರೆ ವರ್ಷದಿಂದ ಅವಳ ಮನೆಯವರಿಗೂ ತಿಳಿಸದೇ ಈತ ಅವಳನ್ನು ನಂಬಿಸಿ ಪುಸಲಾಯಿಸಿ ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿದ್ದಾನೆ ಎಂದು ನಾನು ಪುತ್ತೂರು ಡಿವೈಎಸ್ಪಿ ಯವರಿಗೆ ದೂರು ನೀಡಿದ್ದೇನೆ.
ಇಂತಹ ಮನೆಹಾಳು ಕೆಲಸ ಮಾಡುವ, ಇನ್ನೊಬ್ಬರ ಜೀವನದಲ್ಲಿ ಚೆಲ್ಲಾಟವಾಡಿ ತಮ್ಮನ ಹೆಂಡತಿಯನ್ನೇ ವರಿಸಿಕೊಳ್ಳಲು ಸ್ಕೆಚ್ ಹಾಕಿದ ಹರಿಪ್ರಸಾದ್ ಯಾದವ್ ನನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಶಾಸಕ ಸಂಜೀವ ಮಠಂದೂರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರಲ್ಲಿ ಮನವಿ ಮಾಡಿದ್ದೇನೆ ಎಂದು ಸುಧೀರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.