



ಕಾರೊಂದಕ್ಕೆ ಸೈಡ್ ಕೊಡದ ಕಾರಣಕ್ಕೆ ಬಸ್ ಚಾಲಕನಿಗೆ ಬೈದು, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ
ಬೆಳಂಜೆ ಗ್ರಾಮದ ನವೀನ್ ನಾಯ್ಕ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಬಸ್ ಚಾಲಕನಾಗಿರುವ ಇವರು ಡಿ.1 ರಂದು ಸಂಜೆ ಬಸ್ಸಿನಲ್ಲಿ ಬ್ರಹ್ಮಾವರದಿಂದ ಹೆಬ್ರಿಗೆ ಬರುತ್ತಿದ್ದರು. ಈ ವೇಳೆ ರಾತ್ರಿ 7:05 ರ ಸುಮಾರಿಗೆ ಕಳ್ಳೂರು ಗ್ರಾಮದ ಹೈಸ್ಕೂಲ್ ಶಾಲೆಯ ಬಳಿ ತಲುಪಿದಾಗ ಬಸ್ಸಿನ ಹಿಂದುಗಡೆಯಿಂದ ಕಾರಿನಲ್ಲಿ ಬಂದ ದಿನಕರ ಪೂಜಾರಿ ಎಂಬಾತ ಬಸ್ಸನ್ನು ಓವರ್ ಟೇಕ್ ಮಾಡಿದ್ದು ಮಾತ್ರವಲ್ಲದೆ ಕಾರನ್ನು ಬಸ್ಸಿಗೆ ಅಡ್ಡ ಇಟ್ಟು ಚಾಲಕನ ಡೋರ್ ನ ಬಳಿ ಬಂದು ಆತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಅವಾಚ್ಯ ಶಬ್ದದಿಂದ ಬೈದಿದ್ದಾನೆ.
ಚಾಲಕ ನವೀನ್ ಅವರು ಬಸ್ಸಿನಿಂದ ಇಳಿದಾಗ ನಿನಗೆ ಸೈಡ್ ಕೊಡಲು ಆಗುವುದಿಲ್ಲವೇ ಎಂದು ಹೇಳಿ ಚೂರಿಯನ್ನು ತೋರಿಸಿ ಇನ್ನು ಮುಂದೆ ಹೀಗೆಯೇ ಮಾಡಿದರೆ ನಿನ್ನನ್ನು ಇದೇ ಚೂರಿಯಿಂದ ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.