ಕುಂದಾಪುರದಲ್ಲಿ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದ್ದು ಇಂದು ಬೆಳಿಗ್ಗೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅಗ್ನಿ ಶಾಮಕದಳದವರು ಮತ್ತು ಮುಳುಗು ತಜ್ಞರ ಸತತ ಹುಡುಕಾಟದ ಪ್ರಯತ್ನದಿಂದ ನದಿಗೆ ಇಳಿದ 300 ಮೀ ಅಂತರದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (21) ಮೃತಪಟ್ಟ ದುರ್ದೈವಿ.
ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದಾಗ ದುರ್ಘಟನೆ ನಡೆದಿದೆ. ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಎ.29 ರಂದು ಬೆಳಿಗ್ಗೆ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದರು. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳಗೆ ಸ್ನಾನಕ್ಕೆಂದು ತೆರಳಿದರು ಎಂದು ತಿಳಿದು ಬಂದಿದೆ.
ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.