ಕಾರ್ಕಳ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶ್ರೀರಾಮ ಸೇನ ಸಂಸ್ಥಾಪಕ ಮುತಾಲಿಕ್ ಕಾರ್ಕಳದಲ್ಲಿ ಸ್ಪಷ್ಟಪಡಿಸಿದರು.
ಅವರು ಜ. 23ರಂದು ಪತ್ರಿಕಾಗೋಷ್ಠಿ ಆಯೋಜಿಸಿ, ಚುನಾವಣೆ ವಿಚಾರವಾಗಿ ಯಾವುದೇ ಒತ್ತಡಕ್ಕೆ ಮಣಿಯಲಾರೆ, ಬಿಜೆಪಿಯವರು ಪಕ್ಷೇತರ ಅಭ್ಯರ್ಥಿಯಾಗಲಿರುವ ನನ್ನನ್ನು ಬೆಂಬಲಿಸಲಿ. 45 ವರ್ಷಗಳಿಂದ ಹಿಂದುತ್ವಕ್ಕಾಗಿ, 22 ವರ್ಷ ಆರ್ಎಸ್ಎಸ್ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದೇನೆ, ನನಗೆ ಮನೆ ಇಲ್ಲ, ನನ್ನಲ್ಲಿ ಬ್ಯಾಂಕ್ ಅಕೌಂಟ್ ಇಲ್ಲ, ಮದುವೆ ಆಗಿಲ್ಲ, ನೌಕರಿ ಮಾಡಿಕೊಂಡಿಲ್ಲ. ಇಂತಹ ವ್ಯಕ್ತಿಯನ್ನು ಬಿಜೆಪಿ ಬೆಳಿಗ್ಗೆ 11 ಗಂಟೆಗೆ ಬರಮಾಡಿಕೊಂಡು ಅದೇ ದಿನ ಸಂಜೆ 4 ಗಂಟೆಗೆ ತೆಗೆದು ಬಿಸಾಕ್ತಾರೆ ಅಂತಾಂದರೆ ಎಂತಹ ದುರಂತದ ವಿಚಾರ, ನಮ್ಮ ಹೋರಾಟದಿಂದ ಬಿಜೆಪಿ ಇಂದು ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.
ಮುತಾಲಿಕ್ ಮೇಲೆ 109 ಕೇಸ್ ಇವೆ, ಅದರಲ್ಲಿ ಶೇ. 50ರಷ್ಟು ಕೇಸ್ಗಳನ್ನು ಕಾಂಗ್ರೆಸ್ ಹಾಕಿದ್ದು, ಈ ಮೂಲಕ ಕಾಂಗ್ರೆಸ್ ನನ್ನನ್ನು ಹೀರೋ ಮಾಡಿದೆ ಎಂದು ಮುತಾಲಿಕ್ ಹೇಳಿದರು. ಭ್ರಷ್ಟರಹಿತವಾದ ವಾತಾವರಣ ನಿರ್ಮಾಣ ಮಾಡಬೇಕಿದೆ. ಗೋಮಾತೆಯನ್ನ ರಕ್ಷಣೆ ಮಾಡಬೇಕಿದೆ. ಗೋ ಕಳ್ಳತನ ಕೇಸ್ ನಲ್ಲಿ ಕಾರ್ಕಳ ನಂಬರ್ ಜಾಗದಲ್ಲಿದೆ ಎಂದು ಇಡೀ ಜಿಲ್ಲೆಯಾದ್ಯಂತ ಜನರು ಹೇಳುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯ ವಿರುದ್ಧ ನನ್ನ ಹೋರಾಟ. ಅಸಹಾಯಕ ದನಗಳನ್ನು ಕಸಾಯಿ ಖಾನೆಗೆ ನೀಡುವ ಬದಲು, ಸರಕಾರದ ವತಿಯಿಂದಲೇ ಗೋಶಾಲೆಯನ್ನು ನಿರ್ಮಾಣ ಮಾಡಿಕೊಡಬೇಕಿದೆ ಎಂದು ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿವೇಕಾನಂದ ಶೆಣೈ ಕುರಿತು ಮಾತನಾಡಿದ ಮುತಾಲಿಕ್, 2004ರಲ್ಲಿ ಕಾಂಗ್ರೆಸ್ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಈಗಿನ ನಾಯಕರನ್ನು ಗೆಲ್ಲಿಸಿದ್ದಾರೆ, ಅಂತಹ ವ್ಯಕ್ತಿತ್ವವನ್ನು ಗೌರವಿಸುವ ಬದಲು ಅವರಿಗೆ ತೊಂದರೆ ಮಾಡಲಾಗುತ್ತಿದೆ ಎಂದು ಮುತಾಲಿಕ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗುರುರಾಜ್ ಕುಲಕರ್ಣಿ, ಹರೀಶ್ ಅಧಿಕಾರಿ,ಜಯರಂ, ಸುಧೀ ಉಪಸ್ಥಿತರಿದ್ದರು.