ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮತ್ತು ಬಳಕೆ ಮಾಡುತ್ತಿದ್ದ ಆರೋಪದಡಿ ಮಂಗಳೂರಿನ 13 ಮಂದಿಯ ಸಹಿತ 24 ಮಂದಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಚಿಸಲಾದ ವಿಶೇಷ ತಂಡಗಳು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿವೆ.
ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಂಡಬಾಣೆ ರಸ್ತೆ ಜಂಕ್ಷನ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಮೈಸೂರು ಉದಯಗಿರಿ ನಿವಾಸಿ ಅಲಿಂ ಅಹಮ್ಮದ್ (36) ಮಡಿಕೇರಿ ಹಿಲ್ ರಸ್ತೆ ನಿವಾಸಿ ಮೋಸಿನ್.ಎಂ.ಐ (45) ಎಂಬವರನ್ನು ಬಂಧಿಸಿ 128 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ನಗರದ ಮಹಿಳಾ ಸಮಾಜದ ಬಳಿ ನಿಷೇಧಿತ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಡಿಕೇರಿ ನಿವಾಸಿಗಳಾದ ಸಾಗರ್.ಎಂ.ಎ(22), ರಹಮಾನ್.ಎಂ.ಎಸ್ (31) ಚೇತನ್.ಕೆ (23) ಎಂಬವರನ್ನು ಬಂಧಿಸಲಾಗಿದೆ.
ಮಡಿಕೇರಿಯ ಪ್ರವಾಸಕ್ಕಾಗಿ ಆಗಮಿಸಿ ಮಕ್ಕಂದೂರು ಗ್ರಾಮದ ಹೋಂ ಸ್ಟೇ ಯೊಂದರಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಸೆನ್ ಪೊಲೀಸ್ ಠಾಣೆಯ ಪೊಲೀಸರು ಮಂಗಳೂರಿನ ನಿವಾಸಿಗಳಾದ ರಿತಿಕ್ (23) ವಿಶೇಶ್ ಅಜಿತ್ ಅಂಚನ್ (21) ಸುಮನ್ ಹರ್ಷಿತ್ (26), ಚಿರಾಗ್ ಸನಿಲ್ (24) ಮಂಜುನಾಥ್ (30) ಲತೀಶ್ ನಾಯಕ್ (32) ಸಚಿನ್ (26) ರಾಹುಲ್ (26) ಪುಜ್ವಲ್ (32), ಅವಿನಾಶ್ (28), ಪ್ರತಿಕ್ ಕುಮಾರ್ ( 27) ಧನುಷ್ (28) ದಿಲ್ ರಾಜು (30) ಹಾಗೂ ಮಡಿಕೇರಿ ನಿವಾಸಿಗಳಾದ ಹೋಂಸ್ಟೇ ಮಧ್ಯವರ್ತಿ ಗಣೇಶ ಬಿ, (47) ಹೋಂ ಸ್ಟೇ ಮಾಲಕ ಸದಾಶಿವ ಬಿ.ಹೆಚ್ (31 ವರ್ಷ) ಎಂಬವರನ್ನು 414 ಗ್ರಾಂ ಗಾಂಜಾ ಮತ್ತು 9 ಎಲ್ ಎಸ್ ಡಿ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಯ್ಯನಕೋಟೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದ ಸಿದ್ದಾಪುರ ಪೊಲೀಸರು ಚೆನ್ನಯ್ಯನಕೋಟೆ ನಿವಾಸಿಯಾದ ಇಮ್ರಾನ್ (31) ಎಂಬಾತನನ್ನು 190 ಗ್ರಾಂ ಗಾಂಜಾ ಸಹಿತ ಬಂಧಿಸಲಾಗಿದೆ. ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ಕಾಲೇಜು ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದೆ.
ಗೋಣಿಕೊಪ್ಪ ಪೊಲೀಸರು, ಗೋಣಿಕೊಪ್ಪ ನಿವಾಸಿಗಳಾದ ಎಂ.ಎಂ.ಶಮೀರ್ (37) ಎಂ ಜಬ್ಬಾರ್, (23) ನಿಸಾರ್ (37) ಎಂಬುವವರನ್ನು ಬಂಧಿಸಿ 310 ಗ್ರಾಂ ಗಾಂಜಾ ವಶಪಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಒಟ್ಟು 1 ಕೆ.ಜಿ 102 ಗ್ರಾಂ. ಗಾಂಜಾ ಹಾಗೂ 9 ಎಲ್ ಎಸ್ ಡಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.