

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಆರಗ ಗ್ರಾ.ಪಂ ವ್ಯಾಪ್ತಿಯ ಆರಗ ಗೇಟ್ ಸಮೀಪ ಸಂಭವಿಸಿದೆ.

ಅನೇಕ ವರ್ಷಗಳಿಂದ ಕೂಲಿ ಕಾರ್ಮಿಕ ಬರ್ಮಪ್ಪ (55) ಎಂಬಾತ ನಿವೃತ್ತ ಶಿಕ್ಷಕ ದುಗ್ಗಪ್ಪಗೌಡ(75) ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಮದ್ಯಾಹ್ನದವರೆಗೆ ಲವಲವಿಕೆಯಿಂದ ತೋಟದಲ್ಲಿ ಕೆಲಸ ಮಾಡಿ ಬಂದ ಬರ್ಮಪ್ಪ ನಂತರ ಸಂಜೆ ಬಂದು ಊಟ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ಅವನಿಗೆ ಹೃದಯಾಘಾತವಾಗಿ ಅಸುನೀಗಿದ್ದ. ಈ ವಿಷಯ ತಿಳಿದ ತಕ್ಷಣ ದುಗ್ಗಪ್ಪಗೌಡ ಕುಟುಂಬದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬರ್ಮಪ್ಪ ಸಾವನ್ನಪ್ಪಿದ್ದ.

ಸಾವಿನ ಸುದ್ದಿಯನ್ನು ಮನೆಯವರಿಗೆ ತಿಳಿಸಲು ದುಗ್ಗಪ್ಪಗೌಡ ತೆರಳಿದರೆ ದಾರಿ ಮಧ್ಯೆ ಅವರಿಗೂ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಗ್ರಾಮಸ್ಥರ ನೆರವಿನಿಂದ ಆಸ್ಪತ್ರೆಗೆ ಕರೆದುಕೊಂಡು ಹೋದರಾದರು ಹೋಗುವ ಸಮಯದಲ್ಲಿ ಮಾರ್ಗಮಧ್ಯೆ ಅವರು ಅಸುನೀಗಿದ್ದಾರೆ.

