ಮುಖಕ್ಕೆ ಹಾಕಿಕೊಳ್ಳಬೇಕಾದ ಮಾಸ್ಕ್ ನ್ನು ಕಾಲಿನ ಬೆರಳಿಗೆ ಸಿಕ್ಕಿಸಿಕೊಂಡು ಕುಳಿತ ಉತ್ತರಾಖಂಡದ ಸಚಿವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

ಉತ್ತರಾಖಂಡದ ಸಚಿವ ಸ್ವಾಮಿ ಯತೀಶ್ವರಾನಂದ ಕಾಲಿನ ಮೇಲೆ ಕಾಲು ಹಾಕಿ ಕುಳಿತಿರುವ ಫೋಟೋವೊಂದು ವೈರಲ್ ಆಗಿದ್ದು, ಆ ಕಾಲ ಬೆರಳಿನಲ್ಲಿ ಜೋತಾಡುತ್ತಿರುವ ಮಾಸ್ಕ್ ನೋಡಿದ ನೆಟ್ಟಿಗರು ಸಿಟ್ಟಾಗಿದ್ದಾರೆ.

ಉತ್ತರಾಖಂಡದ ಬಿಜೆಪಿ ಸರ್ಕಾರದ ಕಬ್ಬು ಕಾರ್ಖಾನೆ ಸಚಿವ ಸ್ವಾಮಿ ಯತೀಶ್ವರಾನಂದ ಈ ರೀತಿ ಟ್ರೋಲ್ ಆದವರು. ಬಿಜೆಪಿ ಪಕ್ಷದ ನಾಯಕರು ಸಭೆ ನಡೆಸುತ್ತಿರುವ ಈ ಫೋಟೋದಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ.

ಉತ್ತರಾಖಂಡದ ಇನ್ನಿಬ್ಬರು ಸಚಿವರಾದ ಬಿಶನ್ ಸಿಂಗ್ ಚುಪಾಲ್ ಮತ್ತು ಸುಭೋದ್ ಉನಿಯಲ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದು, ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಟೀಕೆ ಮಾಡಿದ್ದಾರೆ.

ನಿಮಗೆ ಯಾವ ನಿಯಮಗಳೂ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಸೋಫಾ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಿರುವ ಸಚಿವ ಸ್ವಾಮಿ ಯತೀಶ್ವರಾನಂದ ತಮ್ಮ ಕಾಲಿಗೆ ಮಾಸ್ಕ್ ಅನ್ನು ತೂಗಿ ಹಾಕಿಕೊಂಡಿದ್ದಾರೆ. ಉತ್ತರಾಖಂಡ ಸರ್ಕಾರದ ಸಚಿವರೇ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಕೂಡ ಟೀಕಿಸಿದ್ದಾರೆ.










