ಕಲಬುರಗಿ: ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ನಡೆದಿದೆ. ಮೃತರನ್ನು ನಾವದಗಿ ಗ್ರಾಮದ ಸೃಷ್ಟಿ ಮಾರುತಿ (21) ಎಂದು ಗುರುತಿಸಲಾಗಿದೆ.
ಡಿಗ್ರಿ ಐದನೇಯ ಸೇಮಿಸ್ಟರ್ನಲ್ಲಿ ಓದುತ್ತಿದ್ದ ಸೃಷ್ಟಿಗೆ ಇತ್ತೀಚೆಗೆ ಮದುವೆಯಾಗಿತ್ತು. ಅತ್ತೆಯ ಮನೆಯಲ್ಲಿದ್ದೇ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಡಿಸೆಂಬರ್ 13ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದಳು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಗಂಡ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡು ಗ್ರಾಮವೆಲ್ಲ ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಸಂಬಂಧಿಕರಿಗೆ ಮತ್ತು ಸೃಷ್ಟಿ ಗೆಳತಿಯರಿಗೆ ಫೋನ್ ಮಾಡಿ ವಿಚಾರಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸೃಷ್ಟಿ ಗಂಡನ ಕುಟುಂಬಸ್ಥರು ಡಿಸೆಂಬರ್ 14ರ ಬೆಳಗ್ಗೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ಸೃಷ್ಟಿ ಕುರಿಕೋಟಾ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥ ಳಕ್ಕೆ ದೌಡಾಯಿಸಿದ ಮಹಾಗಾಂವ್ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದರು. ತನಿಖೆ ನಂತರವಷ್ಟೇ ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬುದು ತಿಳಿದುಬರಬೇಕಾಗಿದೆ.