
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್ಡಿಪಿಎಸ್ ಪ್ರಕರಣಗಳ ತನಿಖೆ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಯನ್ನು ಸೋಮವಾರ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.ಈ ಅವಧಿಯಲ್ಲಿ 24 ದೀರ್ಘಕಾಲ ಬಾಕಿ (LPC) ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದ್ದು, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ಬಿಡಬ್ಲ್ಯು (NBW) ವಾರಂಟ್ ಹೊಂದಿದ್ದ ಆರೋಪಿಗಳನ್ನೂ ಪತ್ತೆಹಚ್ಚಲಾಗಿದೆ.
2026ನೇ ಸಾಲಿನಲ್ಲಿ 88 ಸೊತ್ತು ಕಳವು ಪ್ರಕರಣಗಳನ್ನು ಭೇದಿಸಿ, ಸುಮಾರು ₹1.20 ಕೋಟಿ ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದ 84 ಪ್ರಕರಣಗಳಲ್ಲಿ 142 ಆರೋಪಿಗಳನ್ನು ಬಂಧಿಸಲಾಗಿದ್ದು, ಮಾದಕ ವಸ್ತು ಸೇವನೆಗೆ ಸಂಬಂಧಿಸಿದ 346 ಪ್ರಕರಣಗಳಲ್ಲಿ 443 ಮಂದಿಯನ್ನು ವಶಕ್ಕೆ ಪಡೆದು ಪೆಡ್ಲರ್ಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.ಸೈಬರ್ ವಂಚನೆ ತಡೆಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 1930 ಸಹಾಯವಾಣಿಯ ಮೂಲಕ ವಂಚನೆಗೊಳಗಾದ ಹಣವನ್ನು ಮರುಪಡೆಯುವಲ್ಲಿ ಹಾಗೂ ಸೈಬರ್ ಅಪರಾಧಗಳ ತನಿಖೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು.
ನೇಪಾಳದಿಂದ ಕಾರ್ಯನಿರ್ವಹಿಸುತ್ತಿದ್ದ ಹೂಡಿಕೆ ವಂಚನೆ (Investment Fraud) ಜಾಲವನ್ನು ಭೇದಿಸಿ ದೇಶದ ವಿವಿಧ ರಾಜ್ಯಗಳ ಸೈಬರ್ ಅಪರಾಧಿಗಳ ಪತ್ತೆಗೆ ನೆರವಾದ ತಂಡಕ್ಕೂ ಪ್ರಶಂಸೆ ವ್ಯಕ್ತಪಡಿಸಲಾಯಿತು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣ, ಅಪಪ್ರಚಾರ ಹಾಗೂ ಪ್ರಚೋದನಕಾರಿ ಸಂದೇಶ ಹರಡುವವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡ ಅಧಿಕಾರಿಗಳು, ಗುಣಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಶ್ರಮಿಸಿದ ತನಿಖಾಧಿಕಾರಿಗಳು, 112 ತುರ್ತು ಸ್ಪಂದನೆ ಸೇವೆ ಹಾಗೂ ವಿವಿಧ ಬಂದೋಬಸ್ತು ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ನಿಸ್ತಂತು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.








