ಕಾಸರಗೋಡು: ಸಸಿಹಿತ್ಲು ಮೇಳದ ಬಹುಮುಖ ಪ್ರತಿಭೆಯ ಪದವೀಧರ ಕಲಾವಿದರೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.
ಕಾಸರಗೋಡು ತಾಲೂಕಿನ ನಲ್ಕ ನಿವಾಸಿ ಜಗದೀಶ(56) ಒಂದು ತಿಂಗಳ ಹಿಂದೆ ಅಸೌಖ್ಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಕಾಸರಗೋಡು ತಾಲೂಕಿನ ನಲ್ಕ ಎಂಬಲ್ಲಿ ಜನಿಸಿದ ಜಗದೀಶರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸತ್ಯನಾರಾಯಣ ಹೈಸ್ಕೂಲ್ ಪೆರ್ಲದಲ್ಲಿ ಪೂರೈಸಿ ಜೊತೆಯಲ್ಲಿ ಸಬ್ಬಣ ಕೊಡಿ ರಾಮಭಟ್ಟರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ಮುಂದೆ ಹವ್ಯಾಸಿ ಕಲಾವಿದರಾಗಿದ್ದರು. ಎಡವೆಯಲ್ಲಿಯೇ ಯಕ್ಷಗಾನ ನಾಟಕ ಹರಿಕಥೆ ಏಕಪಾತ್ರ ಅಭಿನಯ ಮುಂತಾದ ಹಲವು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪಗೊಂಡು ಕಳೆದ 21 ವರುಷಗಳಿಂದ ಸಸಿಹಿಟ್ಲು ಭಗವತಿ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.
ಇವರು ಹೊಸ ಪ್ರಸಂಗಗಳ ಕಥಾನಾಯಕನ ಪಾತ್ರವನ್ನು ನಿರ್ವಹಿಸಿ ಪ್ರಸಂಗದ ಯಶಸ್ವಿಗೆ ಕಾರಣೀಭೂತರಾಗಿದ್ದರು. ಯಾವುದೇ ಪಾತ್ರವನ್ನು ಪಾತ್ರಗಳಿಗೆ ಕಿಂಚತ್ತು ಅಪಚಾರವಾಗದಂತೆ ನಿರ್ವಹಿಸುವ ಕಲಾವಿದರು ನಮ್ಮ ನ್ನು ಆಗಲಿರುವುದು ಯಕ್ಷರಂಗಕ್ಕೂ ನಮ್ಮ ಊರಿಗೂ ತುಂಬಲಾರದ ನಷ್ಟವಾಗಿದೆ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಪಾತ್ರದಲ್ಲೂ ಸೈ ಎನಿಸಿಕೊಂಡವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಹೇಮಾ, ಓರ್ವ ಪುತ್ರಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಸಿಹಿತ್ಲು ಮೇಳದ ಸಂಚಾಲಕರು, ಸಹಕಲಾವಿದರು ಸಂತಾಪ ಸೂಚಿಸಿದ್ದಾರೆ.