ಕೆರೆಗೆ ಬಿದ್ದು ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ರಾಮನಗರದ ಕನಕಪುರ ತಾಲೂಕಿನ ಹುಚ್ಚೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಹಾಗೂ ಯಶೋದಾ ದಂಪತಿಯ ಪುತ್ರಿ ರಚನಾ (07) ಮೃತ ದುರ್ದೈವಿ. ಈಕೆ 2ನೇ ತರಗತಿ ಓದುತ್ತಿದ್ದಳು. ಯಶೋದಾ ಅವರು ಪಕ್ಕದ ಗ್ರಾಮದಲ್ಲಿರುವ ಸಣ್ಣ ಕೆರೆಗೆ ಎಂದಿನಂತೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಹೋಗುವಾಗ ತನ್ನ ಮೂವರು ಮಕ್ಕಳನ್ನೂ ಜತೆಗೆ ಕರೆದೊಯ್ದಿದ್ದಾರೆ.
ಯಶೋದಾ ಅವರು ಬಟ್ಟೆ ತೊಳೆಯಲು ನಿರತರಾಗಿದ್ದರು. ಇತ್ತ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಹೀಗಾಗಿ ಮಕ್ಕಳ ಕಡೆ ಗಮನ ಹರಿಸದ ಯಶೋಧಾ ಅವರು ಬಟ್ಟೆ ತೊಳೆಯುತ್ತಿದ್ದರು. ಆದರೆ, ಈ ಸಮಯದಲ್ಲಿ ಮೂರು ಮಕ್ಕಳಲ್ಲಿ 2ನೇ ಪುತ್ರಿ ರಚನಾ ಆಳವಾದ ಗುಂಡಿಗೆ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ವಿಷಯ ಗೊತ್ತಾಗುವುದರೊಳಗೆ ಕಾಲ ಮೀರಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರಕ್ಕೆ ತಂದಿದ್ದಾರೆ. ಪ್ರಕರಣ ದಾಖಲಾಗಿದೆ.