ನೆರೆ ರಾಜ್ಯ ಕೇರಳಕ್ಕೆ ಈಗಾಗಲೇ ನೈಋತ್ಯ ಮುಂಗಾರು ಪ್ರವೇಶಿದ್ದು ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚೆಯೇ ಅಂದರೆ ಭಾನುವಾರ ಕೇರಳಕ್ಕೆ ಪ್ರವೇಶಿಸಿವೆ. ಜೂ.1ರಂದು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ಈ ಬಾರಿ 3 ದಿನ ಮುನ್ನವೇ ಅಂದರೆ ಮೇ 29ರಂದು ಕೇರಳದ ಕರಾವಳಿಗೆ ಮಾರುತಗಳು ಅಪ್ಪಳಿಸಿವೆ.
ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ..?
ಈಗಾಗಲೇ ಕೇರಳಕ್ಕೆ ಎಂಟ್ರಿ ಕೊಟ್ಟಿರುವ ಮುಂಗಾರು ಮಾರುತಗಳು ಪ್ರಬಲವಾದರೆ ಒಂದರೆಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ದುರ್ಬಲವಾದರೆ ತುಸು ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಕಳೆದ 24 ಗಂಟೆಯಲ್ಲಿ ಕೇರಳದ 14 ಮಳೆಯ ಮೇಲ್ವಿಚರಣಾ ಕೇಂದ್ರಗಳ ಪೈಕಿ 10 ಕೇಂದ್ರಗಳಲ್ಲಿ 2.5 ಮಿಮೀ ಮಳೆ ಬಿದ್ದಿರುವುದು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ, ದಕ್ಷಿಣ ತಮಿಳುನಾಡು ಮತ್ತು ಲಕ್ಷದೀಪ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ.
ಈ ಬಾರಿ ಉತ್ತಮ ವರ್ಷಧಾರೆ..!
ಭಾರತದಲ್ಲಿ ಈ ಬಾರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆಯಂತೆ ಮುಂಗಾರು ಮಳೆ ಬೀಳಲಿದೆ. ಶೇ.99 ಮಳೆಯಾಗಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಸ್ಕೈಮೆಟ್ ಸಹ ಶೇ.98 ಮಳೆಯಾಗಲಿದೆ ಎಂದು ಹೇಳಿದೆ. ಈ ಬಾರಿ ಬೇಸಿಗೆಯಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣಾಂಶ ದಾಖಲಾದ ಹಿನ್ನೆಲೆಯಲ್ಲಿ ವಾಡಿಕೆಯಷ್ಟೇ ಮಳೆಯಾಗುವುದಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಾರುತಗಳು ಪ್ರವೇಶಿಸಿದ ಬಳಿಕ ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆಯಾಗಲಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.