ನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಬಿಜೆಪಿ ಮೇಯರ್ಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದು, ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ನಗರಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲದ ಕಾರಣ ಚುನಾಯಿತ ಪ್ರತಿನಿಧಿಗಳು ಚುನಾವಣೆಯಲ್ಲಿ (Elections) ಗೆಲ್ಲುವ ದೃಷ್ಟಿಯಿಂದ ಮಾತ್ರ ಯೋಚಿಸಬಾರದು ಎಂದು ಹೇಳಿದ್ದಾರೆ.
“ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಯೋಚಿಸಬಾರದು. ಚುನಾವಣಾ ಕೇಂದ್ರಿತ ವಿಧಾನದಿಂದ ನಿಮ್ಮ ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ” ಎಂದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಬಿಜೆಪಿ ಮೇಯರ್ಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ಮೇಯರ್ಗಳು ಮತ್ತು ಉಪಮೇಯರ್ಗಳ ಕೌನ್ಸಿಲ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
2014ರಲ್ಲಿ ಭಾರತದ ವಿವಿಧ ನಗರಗಳಲ್ಲಿ ಮೆಟ್ರೋ ರೈಲು ಜಾಲವು 250 ಕಿಮೀಗಿಂತ ಕಡಿಮೆಯಿತ್ತು. ಅದು ಈಗ 750 ಕಿ.ಮೀ.ಗಿಂತ ಹೆಚ್ಚಿದೆ. ಆದರೆ ಇನ್ನೂ 1,000 ಕಿಮೀ ಕೆಲಸ ನಡೆಯುತ್ತಿದೆ. ನಗರಗಳಲ್ಲಿ ಹಳೆ ಕಟ್ಟಡಗಳ ಕುಸಿತ, ಕಟ್ಟಡಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಬಹಳ ಆತಂಕಕಾರಿಯಾಗಿದೆ. ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಮೋದಿ ಹೇಳಿದ್ದಾರೆ.
ಈ ವರ್ಷದ ಬಜೆಟ್ನಲ್ಲಿ ನಗರ ಯೋಜನೆಗೆ ಒತ್ತು ನೀಡಲಾಗಿದೆ. ನಗರ ಯೋಜನೆ ವಿಕೇಂದ್ರೀಕರಣವಾಗುವುದು ಅವಶ್ಯ. ರಾಜ್ಯಮಟ್ಟದಲ್ಲಿ ನಗರ ಯೋಜನೆಯಾಗಲಿ, ದೆಹಲಿಯಿಂದ ಎಲ್ಲವೂ ಆಗುವುದಿಲ್ಲ. ದೊಡ್ಡ ನಗರಗಳ ಸುತ್ತ ಅಭಿವೃದ್ಧಿ ಹೊಂದುತ್ತಿರುವ ಹಲವಾರು ಸ್ಯಾಟಲೈಟ್ ಟೌನ್ಗಳು ದೇಶದಲ್ಲಿವೆ. ಸ್ಯಾಟಲೈಟ್ ಟೌನ್ಗಳನ್ನು ಆಯಕಟ್ಟಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಆಗ ಮಾತ್ರ ನಗರಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ದೇಶದ ಜನರು ಬಿಜೆಪಿಯನ್ನು ನಂಬುತ್ತಾರೆ. ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲಾ ಮೇಯರ್ಗಳ ಜವಾಬ್ದಾರಿಯಾಗಿದೆ. ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಬೆಳವಣಿಗೆಯನ್ನು ಉತ್ತಮವಾಗಿ ಯೋಜಿಸಬೇಕು ಎಂದು ಮೋದಿ ಹೇಳಿದ್ದಾರೆ.