ತಾಲಿಬಾನಿಗಳ ಅಟ್ಟಹಾಸಕ್ಕೆ ಅಫ್ಘಾನಿಸ್ತಾನ ತತ್ತರಿಸಿ ಹೋಗ್ತಿದೆ. ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿರೋ ಉಗ್ರರಿಗೆ ಆ ಒಂದು ಪ್ರಾಂತ್ಯವನ್ನ ಮಾತ್ರ ಟಚ್ ಮಾಡೋಕೂ ಆಗ್ತಿಲ್ಲ. ಶರಣಾಗುವಂತೆ ಆ ಪ್ರಾಂತ್ಯದ ಜನರನ್ನ ಕೇಳಿರೋ ಇವ್ರಿಗೆ ಸಿಕ್ತಿರೋದು ತಿರುಗೇಟುಗಳಷ್ಟೇ. ಆದ್ರೆ, ಈಗ ಪಂಜ್ಶಿರ್ನ ಪಡೆದೇ ತೀರಬೆಕೆಂದು ಪಣತೊಟ್ಟಿರೋ ರಾಕ್ಷಸರು ಆ ಪ್ರಾಂತ್ಯದ ಮೇಲೆ ದಾಳಿಗೆ ಮುಂದಾಗಿದ್ದಾರೆ.
ಇಡೀ ಅಫ್ಘಾನಿಸ್ತಾನವನ್ನೇ ಕಬ್ಜಾ ಮಾಡಿಕೊಂಡಿರುವ ತಾಲಿಬಾನಿಗಳಿಗೆ ಆ ಒಂದು ಪ್ರಾಂತ್ಯ ಮಾತ್ರ ಕೈವಶವಾಗಿಲ್ಲ. ಇಡೀ ದೇಶವನ್ನೇ ಹೆದರಿಸಿ ಬೆದರಿಸಿ ಹಿಡಿತಕ್ಕೆ ತೆಗೆದುಕೊಂಡಿರೋ ನರರಾಕ್ಷಸರಿಗೆ ಪಂಜ್ಶಿರ್ ಇವತ್ತಿಗೆ ದುಸ್ವಪ್ನ ಅಂದ್ರೆ ತಪ್ಪಾಗಲ್ಲ.. ಯಾಕಂದ್ರೆ, ಅಲ್ಲಿ ತಾಲಿಬಾನ್ ಹಾಗೂ ಅದರ ರೀತಿ ರಿವಾಜುಗಳನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸೋ ವಿರೋಧಿ ಪಡೆಯೇ ಇದೆ.. ಹೇಗಾದ್ರೂ ಮಾಡಿ ಆ ಪ್ರಾಂತ್ಯವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರೋ ಸೈತಾನರು ಈಗ ಪಂಜ್ಶಿರ್ಗೆ ಲಗ್ಗೆ ಇಟ್ಟಿದ್ದಾರೆ.
ಹೌದು.. ತಾಲಿಬಾನ್ನ 100ಕ್ಕೂ ಹೆಚ್ಚು ಉಗ್ರರು ಪಂಜ್ಶಿರ್ ಕಡೆ ಹೊರಟಿದ್ದಾರೆ. ಶಸ್ತ್ರಾಸ್ತ್ರಗಳ ಜೊತೆಗೆ ಈಗಾಗಲೇ ಪಂಜ್ಶಿರ್ನತ್ತ ತೆರಳಿರುವ ಭಯೋತ್ಪಾದಕರು ಈಗಾಗಲೇ 2 ಚೆಕ್ಪಾಯಿಂಟ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಂಜ್ಶಿರ್ನಲ್ಲಿರುವ ಜನರಿಗೆ ಶರಣಾಗುವಂತೆ ತಾಲಿಬಾನಿಗಳು ಡೆಡ್ಲೈನ್ ನೀಡಿದ್ದರು. ಆ ಡೆಡ್ಲೈನ್ ಮುಗಿದಿರೋದ್ರಿಂದ ಈಗ ಅಲ್ಲಿರುವವರ ಮೇಲೆಯೂ ಹಿಂಸಾಮಾರ್ಗ ಅನುಸರಿಸಲು ತಾಲಿಬಾನಿಗಳು ಮುಂದಾಗಿದ್ದಾರೆ. ಆದ್ರೆ, ಇದಕ್ಕೆಲ್ಲಾ ಹೆದರೋದಿಲ್ಲ ಎಂಬ ಸಂದೇಶವನ್ನ ಪಂಜ್ಶಿರ್ನಲ್ಲಿರೋ ತಾಲಿಬಾನ್ ವಿರೋಧಿ ನಾಯಕ ಅಹ್ಮದ್ ಶಾ ಮಸೂದ್ ರವಾನಿಸಿದ್ದಾರೆ.
‘ಇದು ಪ್ರಾರಂಭವಷ್ಟೇ’
ನಾನು ಅಹ್ಮದ್ ಶಾ ಮಸೂದ್ನ ಮಗ, ತಾಲಿಬಾನ್ಗೆ ಶರಣಾಗುವುದು ನನ್ನ ವ್ಯಕ್ತಿತ್ವವಲ್ಲ. ಇದು ಕೇವಲ ಆರಂಭವಷ್ಟೇ.. ಹೋರಾಟ ಈಗಷ್ಟೇ ಶುರುವಾಗಿದೆ.
ಹೌದು, ಅಹ್ಮದ್ ಶಾ ಹೀಗೆ ಹೇಳುವ ಮೂಲಕ ತಾಲಿಬಾನಿಗಳಿಗೆ ತಾಕತ್ತಿದ್ದರೆ ನಮ್ಮನ್ನು ಮುಟ್ಟಿ ಎಂದು ಸವಾಲು ಹಾಕಿದ್ದಾರೆ. ಇಲ್ಲಿ ಇನ್ನೊಂದು ವಿಚಾರ ನಿಮಗೆ ಗೊತ್ತಿರ್ಲಿ, ರಾಜಧಾನಿ ಕಾಬೂಲ್ನಿಂದ ಪಲಾಯನಗೈದ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಕೂಡ ಸದ್ಯ ಇದೇ ಪಂಜ್ಶಿರ್ ಜಿಲ್ಲೆಯಲ್ಲಿದ್ದಾರೆ. ಇಲ್ಲಿದ್ದುಕೊಂಡೇ ತಾಲಿಬಾನ್ಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಹಾಗೇ ನೋಡಿದ್ರೆ, ಪಂಜ್ಶೀರ್ ಪ್ರಾಂತ್ಯ ಬರೀ ತಾಲಿಬಾನಿಗಳಿಗಷ್ಟೇ ಅಲ್ಲ, ಯಾರಿಗೂ ತಲೆಬಾಗಿದವರಲ್ಲ.
ಪಂಜ್ಶಿರ್ ಹೋರಾಟ ಹಿನ್ನೆಲೆ
ಪಂಜ್ಶಿರ್ ತಾಲಿಬಾನಿಗಳಿಗಾಗಲಿ, ವಿದೇಶಿ ಶಕ್ತಿಗಳಿಗಾಗಲಿ ಇಲ್ಲಿ ತನಕ ತಲೆಬಾಗಿಲ್ಲ. ಸೋವಿಯತ್ ಒಕ್ಕೂಟಕ್ಕು 1990ರಲ್ಲಿ ಪಂಜ್ಶಿರ್ನ ಟಚ್ ಮಾಡಲು ಸಾಧ್ಯವಾಗಿಲ್ಲ. ಆ ಬಳಿಕ ಬಂದ ತಾಲಿಬಾನಿಗಳಿಗೂ ಪಂಜ್ಶಿರ್ ಮುಟ್ಟಲು ಸಾಧ್ಯವಾಗಿಲ್ಲ. ಇನ್ನು, ಪಂಜ್ಶಿರ್ ಸಿಂಹ ಅಂತಲೇ ಖ್ಯಾತಿ ಪಡೆದಿದ್ದ ಮೊಹ್ಮದ್ ಶಾ ಮಸೂದ್ ಹಾಕಿದ ಅಡಿಪಾಯವೇ ಇಂದಿಗೂ ಇಲ್ಲಿನ ಹೋರಾಟಗಾರರ ಶಕ್ತಿಯಾಗಿದೆ. ಈಗ ಮೊಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್ ನೇತೃತ್ವದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೀತಿದೆ.
ಹೀಗೆ, ಇಂದು ಪಂಜ್ಶೀರ್ ಪ್ರಾಂತ್ಯ ತಾಲಿಬಾನಿಗಳ ಗುಂಡಿನ ಸದ್ದಿಗೆ ಹೆದರದೇ ಎದೆಯೊಡ್ಡಿನಿಂತಿದೆ ಅಂದ್ರೆ, ಅದರ ಹಿಂದೆ ಅಹ್ಮದ್ ಮಸೂದ್, ಹಾಗೂ ಅಮ್ರುಲ್ಲಾಹ್ ಸಲೇಹ್ ಇದ್ದಾರೆ. ತಾಲಿಬಾನ್ ಹೋರಾಟಕ್ಕೆ ಮಣಿಯೋದಿಲ್ಲ ಅಂತಾ ಪಂಜ್ಶಿರ್ ನಾರ್ದನ್ ಅಲಿಯನ್ಸ್ ಯೋಧರು ಈಗಾಗಲೇ ಸಮರಕ್ಕೂ ಸಜ್ಜಾಗಿಬಿಟ್ಟಿದ್ದಾರೆ. ಹೀಗಾಗಿ, ಅಫ್ಘಾನ್ ಸಂಘರ್ಷ ರಣರೋಚಕ ಘಟ್ಟ ತಲುಪಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಸೃಷ್ಟಿಸಿದೆ.