ಕೊರೊನಾ ಬಳಿಕ ರಾಜ್ಯದಲ್ಲಿ ಹೆಚ್ 3ಎನ್ 2 ವೈರಲ್ ಆತಂಕ ಮೂಡಿಸಿದ್ದು, ಇದೀಗ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ.
H3N2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ. ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದು, ಈಗಾಗಲೇ ರಾಜ್ಯದ ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದು, ಹಾಸನದಲ್ಲಿ ಆರು ಜನರಿಗೆ ಹೆಚ್3ಎನ್2 ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊಮಾರ್ಬಿಡಿಟಿ ಮತ್ತು 60 ವರ್ಷ ಮೇಲ್ಪಾಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೊದಲ ಸಾವಿನ ಬಗ್ಗೆ ಆಡಿಟ್ ಮಾಡಲು ಮುಂದಾಗಿದ್ದು, ಯಾರು ಸೆಲ್ಪ್ ಟ್ರಿಟ್ಮೆಂಟ್ ತೆಗೆದುಕೊಳ್ಳದೇ ವೈದ್ಯರನ್ನು ಸಂಪರ್ಕಿಸಲು ಆಯುಕ್ತ ರಂದೀಪ್ ಸಲಹೆ ನೀಡಿದ್ದಾರೆ.
ಜ್ವರ, ಗಂಟಲುನೋವು, ಕೆಮ್ಮಿನಿಂದ ಬಳಲುತ್ತಿದ್ದ ಹಾಸನ ಜಿಲ್ಲೆ ಆಲೂರು ಮೂಲದ ವೃದ್ದ ಮಾರ್ಚ್ 1 ರಂದು ಆಲೂರಿನಲ್ಲಿ ಮೃತಪಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮಾವಾಗಿ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲಹಳ್ಳಿಯಲ್ಲಿ ಅರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅನಾರೋಗ್ಯ ಪೀಡಿತ ಜನರನ್ನು ವೈದ್ಯರ ತಂಡ ತಪಾಸಣೆ ಮಾಡುತ್ತಿದೆ. ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದೃವವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ
ಎಚ್3ಎನ್2 ವೈರಸ್ನಿಂದ ಹರಡಿರುವ ಸೋಂಕು ಕನಿಷ್ಠ 5ರಿಂದ 7 ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. 15 ವರ್ಷದಿಂದ 65 ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಹಾಗೂ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.