ಕೋಟ: ಅನ್ನ ಸಾಂಬಾರಿಗೆ ಗಾಜಿನ ಚೂರನ್ನು ಹಾಕಿ ಸಂಬಂಧಿಕರ ಮನೆಯಲ್ಲಿ ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಕೋಟ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ
ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕೆರೆಯ ನಿವಾಸಿ ವಿಜಯೇಂದ್ರ (28 ವರ್ಷ) ಎಂಬಾತನೇ ಬಂಧಿತ ಆರೋಪಿ. ಮಾರ್ಚ್ 12ರಂದು ಗೀತಾ ಎಂಬವರ ಮನೆಯವರು ಊಟ ಮಾಡುವ ವೇಳೆಯಲ್ಲಿ ಅನ್ನ ಹಾಗೂ ಸಾಂಬಾರ್ನಲ್ಲಿ ಗಾಜಿನ ಚೂರುಗಳು ಪತ್ತೆಯಾಗಿದ್ದವು. ಅಲ್ಲದೇ ನಂತರ ಎರಡು ದಿನಗಳ ಕಾಲವೂ ಗಾಜಿನ ಚೂರು ಪತ್ತೆಯಾಗುತ್ತಲೇ ಇತ್ತು. ಇದರಿಂದ ಮನೆಯವರೆಲ್ಲಾ ಆತಂಕಕ್ಕೆ ಒಳಗಾಗಿದ್ದರು.
ಈ ಮೂರು ದಿನಗಳ ಕಾಲ ಗೀತಾ ಅವರ ಮನೆಗೆ ವಿಜಯೇಂದ್ರ ಬಂದಿದ್ದ ಎನ್ನಲಾಗಿದೆ. ಹೀಗಾಗಿ ಗೀತಾ ಅನುಮಾನಗೊಂಡು ತನ್ನ ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮರಾ ಅವರನ್ನು ಅಡಗಿಸಿ ಇಟ್ಟಿದ್ದರು. ಎ.17 ರಂದು ಸಂಜೆ ವಿಜಯೇಂದ್ರ ಗೀತಾ ಅವರ ಮನೆಗೆ ಬಂದಿದ್ದ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ತೆರಳಿದ್ದಾನೆ. ಈ ವೇಳೆಯಲ್ಲಿ ತಾನು ತಂದಿದ್ದ ಗಾಜಿನ ಪುಡಿಯನ್ನು ಅನ್ನ ಹಾಗೂ ಸಾಂಬಾರ್ಗೆ ಬೆರೆಸಿದ್ದಾನೆ.
ವಿಜಯೇಂದ್ರ ಅಡುಗೆ ಮನೆಯಿಂದ ಹೊರಗೆ ಬರುತ್ತಲೇ ಗೀತಾ ತಾವು ಇಟ್ಟಿದ್ದ ಮೊಬೈಲ್ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಮೊಬೈಲ್ನಲ್ಲಿ ವಿಜಯೇಂದ್ರನ ಖತರ್ನಾಕ್ ಕೆಲಸ ಬೆಳಕಿಗೆ ಬಂದಿದೆ. ಈ ಕುರಿತು ಗೀತಾ ಅವರು ಕೋಟ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ವಿಜಯೇಂದ್ರ ಯಾವ ಕಾರಣಕ್ಕೆ ಈ ರೀತಿ ಕೃತ್ಯ ಎಸಗಿದ್ದಾನೆ ಅನ್ನೋದು ತಿಳಿದು ಬಂದಿಲ್ಲ.