ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಗಗನಸಖಿ ಅರ್ಚನಾ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನೇ ಗಗನಸಖಿ ಬಾಳಿಗೆ ಮುಳ್ಳಾಗಿ ಕೊಲೆ ಮಾಡಿದ್ದಾನೆ ಎಂಬ ಸ್ಪೋಟಕ ಸತ್ಯ ತನಿಖೆ ಬಳಿಕ ಬಯಲಾಗಿದೆ.
ಕಳೆದ ಮಾರ್ಚ್ 11 ರಂದು ಗಗನಸಖಿ ಅರ್ಚನಾ ಕೋರಮಂಗಲದ ನಾಲ್ಕನೇ ಮಹಡಿಯ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದರು. FIR ದಾಖಲಿಸಿದ ಪೊಲೀಸರು ಅರ್ಚನಾ ಪ್ರಿಯಕರ ಅದೇಶ್ನನ್ನು ಬಂಧಿಸಿದ್ದರು. ತನಿಖೆ ವೇಳೆ ಅರ್ಚನಾಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅನ್ನುವುದು ಬೆಳಕಿಗೆ ಬಂದಿದೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಹಾಗೂ ಕೇರಳ ಮೂಲದ ಆದೇಶ್ ಗೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದರೆ, ಆದೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು.
ಕುಡಿದ ಮತ್ತಿನಲ್ಲಿ ಮದುವೆ ವಿಚಾರಕ್ಕೆ ಜಗಳ
ಮಾರ್ಚ್ 11ರ ರಾತ್ರಿ ಅದೇಶ್ ಮತ್ತು ಅರ್ಚನಾ ಇಬ್ಬರೂ ಪಾರ್ಟಿ ಮಾಡಿದ್ದಾರೆ. ನಂತರ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಅದೇಶ್, ಬಿಲ್ಡಿಂಗ್ನ ನಾಲ್ಕನೇ ಮಹಡಿಯಿಂದ ಅರ್ಚನಾಳನ್ನ ತಳ್ಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅರ್ಚನಾಳನ್ನು ಕೊಲೆ ಮಾಡಿದ್ದ ಅದೇಶ್ ಆಕೆಯ ತಂದೆಗೆ ಫೋನ್ ಮಾಡಿದ್ದ. ಅರ್ಚನಾ ಮದ್ಯಪಾನ ಮಾಡಿದ್ದು, ಇಬ್ಬರ ಮಾತುಕತೆ ವೇಳೆ ಗಲಾಟೆಯಾಗಿತ್ತು. ನಂತರ ಆಕೆ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಫೋನ್ನಲ್ಲಿ ಹೇಳಿದ್ದನು. ನಂತರ ಅರ್ಚನಾ ತಂದೆ ದೇವರಾಜ್ ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅರ್ಚನಾಳನ್ನು ಕೊಲೆ ಮಾಡುವ ಉದ್ದೇಶದಿಂದಲೇ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾರೆ ಎಂದು ದೂರು ನೀಡಿದ್ದರು.
ಆದೇಶ್ನನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರ ನಡುವಿನ ಗಲಾಟೆ ಕಹಾನಿ ಬಯಲಾಗಿದೆ. ಐಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಮದುವೆಯಾಗುವಂತೆ ಅರ್ಚನಾ ಪೀಡಿಸುತ್ತಿದ್ದಳು. ನನ್ನ ಮನೆಯಲ್ಲಿ ಮದುವೆ ತಯಾರಿ ನಡೆದಿದೆ. ಇಬ್ಬರ ಮದುವೆ ಬಗ್ಗೆ ಮಾತಾಡುವಂತೆ ಒತ್ತಾಯಿಸಿದ್ದಳು. ಮೂರು ತಿಂಗಳಿಂದ ಹಲವು ಸಬೂಬು ನೀಡಿ ಆರೋಪಿ ಅದೇಶ್ ಕಾಲಹರಣ ಮಾಡಿದ್ದಾನೆ.
ಕಳೆದ ಮಾರ್ಚ್ 11ರ ರಾತ್ರಿ ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಅರ್ಚನಾ, ಮದುವೆಯಾಗದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾಳೆ. ಈ ವೇಳೆ ಕುಡಿದ ಅಮಲಿನಲ್ಲಿ ಅದೇಶ್ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾನೆ. ಅದೇಶ್ ಬಂಧಿಸಿರುವ ಕೋರಮಂಗಲ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.