ಜಾನುವಾರುಗಳನ್ನು ಬಾಧಿಸುತ್ತಿರುವ ಚರ್ಮ ಗಂಟು ಕಾಯಿಲೆಯ ನಿಯಂತ್ರಣಕ್ಕೆ ರಾಜ್ಯಗಳೊಂದಿಗೆ ಕೇಂದ್ರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸೋಂಕಿಗೆ ಭಾರತೀಯ ವಿಜ್ಞಾನಿಗಳು ಸ್ವದೇಶಿ ಲಸಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ. ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಲೋದಲ್ಲಿ ನಡೆದ ಅಂತಾರಾಷ್ಟ್ರೀಯ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಲಂಪಿ ಸ್ಕಿನ್ ಜಾನುವಾರು ರೋಗದಿಂದ ಹೈನುಗಾರಿಕೆ ಸದ್ಯ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ರೋಗವನ್ನು ನಿಯಂತ್ರಣದಲ್ಲಿಡು ಸಲುವಾಗಿ ಪ್ರಾಣಿಗಳ ಚಲನವಲನವನ್ನು ಪತ್ತೆ ಹಚ್ಚಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಲಸಿಕೆ ಸಿದ್ಧಪಡಿಸಿದ್ದಾರೆ ಎಂದು ಪ್ರಕಟಿಸಿದರು. ಪ್ರಾಣಿಗಳ ಲಸಿಕೆ ಅಥವಾ ಇನ್ನಾವುದೇ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೈನುಗಾರಿಕೆ ಉದ್ಯಮಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಚರ್ಮ ಗಂಟು ಕಾಯಿಲೆಯಿಂದ ಹಾಲಿನ ಉತ್ಪಾದನೆ ಕುಂಠಿತ
ಏತನ್ಮಧ್ಯೆ, ದೇಶಾದ್ಯಂತ 57,000 ಜಾನುವಾರುಗಳು ಚರ್ಮ ಗಂಟು ಕಾಯಿಲೆಯಿಂದ ಸಾವನ್ನಪ್ಪಿವೆ ಎಂದು ಕೇಂದ್ರ ಹೇಳಿದೆ. ಈ ಕಾಯಿಲೆಯಿಂದ ರಾಜಸ್ಥಾನ ಒಂದರಲ್ಲೇ ಸುಮಾರು 37,000 ಮೂಕ ಪ್ರಾಣಿಗಳು ಸಾವನ್ನಪ್ಪಿವೆ. ರಾಜಸ್ಥಾನವಲ್ಲದೆ, ಗುಜರಾತ್, ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿಯೂ ಈ ವೈರಸ್ ಹಾನಿಯನ್ನುಂಟುಮಾಡುತ್ತಿದೆ.
ಈ ರೋಗವು ಮೊದಲು ಯುರೋಪ್ನಲ್ಲಿ ಕಾಣಿಸಿಕೊಂಡಿತು, ನಂತರ ಏಷ್ಯಾಕ್ಕೆ ಹರಡಿದೆ. 2019 ರಲ್ಲಿ, ಬಾಂಗ್ಲಾದೇಶದಲ್ಲಿ ಲಂಪಿ ಸ್ಕಿನ್ ಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದವು. ಅದಾದ ಮಾರನೆಯ ವರ್ಷವೇ ಭಾರತದಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಭಾರತ, 2019 ರಲ್ಲಿ 192.5 ಮಿಲಿಯನ್ ಜಾನುವಾರು ಜನಸಂಖ್ಯೆಯನ್ನು ಹೊಂದಿತ್ತು. ಆದಾಗ್ಯೂ, ಲಂಪಿ ಸ್ಕಿನ್ ಡಿಸೀಸ್ ಪತ್ತೆಯಾದ ನಂತರ ಹಾಲು ಸಂಗ್ರಹಣೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಚರ್ಮ ಗಂಟು ಕಾಯಿಲೆ ಎಂದರೇನು?
ಜಾನುವಾರುಗಳ ಕಾಡುವ ಚರ್ಮಗಂಟು ರೋಗ ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ
ಲಂಪಿ ಚರ್ಮದ ಕಾಯಿಲೆಯು ಜಾನುವಾರುಗಳಲ್ಲಿ ಕಾಣಬರುವ ಅಪಾಯಕಾರಿ ಸಾಂಕ್ರಾಮಿಕ ಮತ್ತು ವೈರಲ್ ಸೋಂಕು. ಬಾಧಿತ ಜಾನುವಾರುಗಳಿಗೆ ಚರ್ಮದ ದದ್ದುಗಳ ಜೊತೆಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಜ್ವರ ತೀವ್ರತೆಯು ಹೆಚ್ಚಾಗುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ. ಸೊಳ್ಳೆಗಳು, ನೊಣಗಳು, ಹೇನುಗಳು ಮತ್ತು ಕಣಜಗಳಿಂದ ಈ ರೋಗವು ಹರಡುತ್ತದೆ. ಇದು ಕಲುಷಿತ ಆಹಾರ ಮತ್ತು ನೀರಿನ ಮೂಲಕವೂ ಹರಡುತ್ತದೆ.