ಜ್ಞಾನವಾಪಿ ಮಸೀದಿಯಲ್ಲಿ ಕಾಣಿಸಿಕೊಂಡಿರುವ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಮನವಿಯ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಿದೆ. ಹಿಂದೂಗಳು ಸಲ್ಲಿಸಿರುವ ಅರ್ಜಿಗೆ ನಕಾರ ವ್ಯಕ್ತವಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಅಜಯ್ ಕೃಷ್ಣ ಶಿವಲಿಂಗದ ಮೇಲೆ ವೈಜ್ಞಾನಿಕ ತನಿಖೆ ನಡೆಸದಂತೆ ಆದೇಶ ನೀಡಿದ್ದಾರೆ.
ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಲಾಗಿತ್ತು . ಮುಸ್ಲಿಮರು
ನಮಾಜ್ಗೂ ಮುನ್ನ ಬಳಸುತ್ತಿದ್ದ ‘ವಝೂಖಾನ’ ಕೊಳದ ಸಮೀಪ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಆಗ ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ ಒಳಪಡಿಸಬೇಕು ಎಂದು ಜ್ಞಾನವಾಪಿ– ಶೃಂಗಾರ ಗೌರಿ ಮೊಕದ್ದಮೆಯ ಹಿಂದೂಪರ ಅರ್ಜಿದಾರರು ಮನವಿ ಮಾಡಿದ್ದರು.
ಈ ಅರ್ಜಿಗಳ ಮೇಲಿನ ವಾದಗಳು ಮಂಗಳವಾರ ಪೂರ್ಣಗೊಂಡಿದ್ದವು. ನ್ಯಾಯಾಲಯವು ಅಕ್ಟೋಬರ್ 14ರಂದು ತೀರ್ಪು ಪ್ರಕಟಿಸಲಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ಮಹೇಂದ್ರ ಪ್ರತಾಪ್ ಪಾಂಡೆ ತಿಳಿಸಿದ್ದರು.
ಮುಸ್ಲಿಂ ಪರ ವಕೀಲ ಮುಮ್ತಾಜ್ ಅಹ್ಮದ್ ಅವರು ‘ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಮಾಡಲು ಸಾಧ್ಯವಿಲ್ಲ . ಕಾರ್ಬನ್ ಡೇಟಿಂಗ್ ಹೆಸರಿನಲ್ಲಿ ವಸ್ತು ಹಾನಿಗೊಳಗಾದರೆ, ಅದು ಸುಪ್ರೀಂ ಕೋರ್ಟ್ನ
ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ’ ಎಂದು ಪ್ರತಿಪಾದಿಸಿದ್ದರು.