ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2020-21ನೇ ಸಾಲಿನಲ್ಲಿ 147.23 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 59.58 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಿದೆ. ಡಿ.18ರಂದು ಬೆಳಗ್ಗೆ 10.30ಕ್ಕೆ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ವಾರ್ಷಿಕ ಮಹಾ ಸಭೆ ನಡೆಯಲಿದೆ ಎಂದು ಸಂಘದ ಅದ್ಯಕ್ಷ ನರಸಪ್ಪ ಪೂಜಾರಿ ಎನ್. ಹೇಳಿದರು.
2020-21ನೇ ಸಾಲಿನಲ್ಲಿ 194 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 54.66ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 4970 ಎ ತರಗತಿ ಸದಸ್ಯರಿದ್ದು, 2.72ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಸರ್ಕಾರದ ಬಿ ತರಗತಿಯ 81 ಸಾವಿರ ರೂ ಪಾಲುಬಂಡವಾಳವಿದ್ದು, ಒಟ್ಟು 2.73ಕೋಟಿ ಪಾಲು ಬಂಡವಾಳವಿದೆ. ಒಟ್ಟು ಠೇವಣಾತಿಯಲ್ಲಿ ಶೇ.18.19 ಹೆಚ್ಚಳವಾಗಿದೆ ಎಂದು ಅವರು ಬುಧವಾರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ 25.33 ಕೋಟಿ ಸಾಲ ನೀಡಿದ್ದು, ಇದರಲ್ಲಿ ಮಂಗಳಾ ಕಿಸಾನ್ ಕಾರ್ಡ್ ಹೊಂದಿದ ರೈತ ಸದಸ್ಯರಿಗೆ 11.06ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಶೇ.94.03 ರಷ್ಟು ವಸೂಲಾತಿ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ 24.23ಲಕ್ಷ ಎಸ್ ಟಿ ಸಾಲಗಳ ಬಡ್ಡಿ ಹಾಗೂ 9.30ಲಕ್ಷ ಯಂ ಟಿ ಸಾಲಗಳ ಬಡ್ಡಿ ಮತ್ತು 2.08ಲಕ್ಷ ಯಸ್ ಯಚ್ ಜಿ ಸಾಲದ ಬಡ್ಡಿ ಹಾಗೂ ಕೇಂದ್ರ ಸರ್ಕಾರದಿಂದ 1,09,48,539 ರೂ ಬಡ್ಡಿ ಬರಲು ಬಾಕಿ ಇದೆ. ಆಹಾರ ಧಾನ್ಯ, ಸೀಮೆ ಎಣ್ಣೆ, ಕೊಂಕಣ ಗ್ಯಾಸ್, ರಾಸಾಯನಿಕ ಗೊಬ್ಬರ, ಕೀಟನಾಶಕಗಳು 57.32ಲಕ್ಷ ರೂ ಮೌಲ್ಯದ್ದು ಮಾರಾಟವಾಗಿದ್ದು, 6.78ಲಕ್ಷ ರೂ. ಲಾಭ ಬಂದಿದೆ ಎಂದು ತಿಳಿಸಿದರು.
ವಿಟ್ಲ ಪ್ರಧಾನ ಕಛೇರಿಯ ಹಾಗೂ ಕುಂಡಡ್ಕ ಶಾಖೆಯಲ್ಲಿ ಮೇಲ್ಚಾವಣಿಯನ್ನು ನಿರ್ಮಾಣಮಾಡಿದ್ದು, ಗೋದಾಮು ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೋವಿಡ್ 19 ನಡುವೆಯೂ ರೈತರು ಉತ್ತಮ ರೀತಿಯಲ್ಲಿ ಸಂಸ್ಥೆಯ ಜತೆಗೆ ಸ್ಪಂದನೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರಾದ ಉದಯ ಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ, ರಾಘವೇಂರ ಪೈ, ದಿನೇಶ ಕೆ., ವಾಸು ಸಿ. ಎಚ್., ಶಿವಪ್ಪ ನಾಯ್ಕ, ಅಚ್ಯುತ್ ನಾಯಕ್, ಗೌರಿ ಎಸ್. ಎನ್. ಭಟ್, ಸಂಗೀತಾ ಎನ್., ಕವಿತಾ ಕೆ. ಎಲ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ. ಪಿ. ಉಪಸ್ಥಿತರಿದ್ದರು.