ತುಮಕೂರು: ಮನೆ ಮುಂದಿನ ನೀರಿನ ಸಂಪ್ ಗೆ ಬಿದ್ದ ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕಾಗಿ ಅಣ್ಣನ ಜೊತೆ ಸೇರಿ ತಾಯಿಯನ್ನೇ ಮಗಳು ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪುನೀತ್ (26) ಮತ್ತು ಶೈಲಜಾ (21) ಬಂಧಿತ ಅಣ್ಣ-ತಂಗಿ.
ಕಳೆದ ಜನವರಿ 30 ರಂದು ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ಪ್ರೀತಿಗೆ ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ವರಸೆಯಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದಾನೆ. ಹೊರಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ ವರ್ತನೆ ಮಾಡ್ತಿದ್ದರು. ಆದರೆ ಮನೆಯೊಳಗೆ.. ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗ್ತಿದ್ದರು. ಇಬ್ಬರ ಲವ್ವಿ ಡವ್ವಿಗೆ ಬ್ರೇಕ್ ಹಾಕಿ ಪುನೀತ್ ಹಾಗೂ ಶೈಲಜಾಗೆ ಸಾವಿತ್ರಮ್ಮ ಹಾಗೂ ಪುನೀತ್ ತಾಯಿ ಬುದ್ಧಿ ಹೇಳಿದ್ದರು.
ಮೆಸೇಜ್ ಅಥವಾ ಕಾಲ್ ಮಾಡದಂತೆ ಇಬ್ಬರಿಗೂ ಎಚ್ಚರಿಕೆ ಸಹ ಕೊಟ್ಟಿದ್ದರು. ಸ್ವಲ್ಪ ದಿನಗಳ ಕಾಲ ಅಣ್ಣ-ತಂಗಿಯಂತೆ ಇದ್ದವರು ಮತ್ತೆ ಅನೈತಿಕ ಸಂಬಂಧಕ್ಕೆ ಬೆಸೆದುಕೊಂಡಿದ್ದಾರೆ. ಇದೇ ವೇಳೆ ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಸಾವಿತ್ರಮ್ಮನನ್ನ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಶೈಲಜಾ ಹಾಗೂ ಪುನೀತ್ ಜೋಡಿ.
ಬಳಿಕ, ಸಾವಿತ್ರಮ್ಮ ಕಾಲು ಜಾರಿ ಸಂಪ್ ಗೆ ಬಿದ್ದು ಸಾವನ್ನಪ್ಪಿರೋದಾಗಿ ಶೈಲಜಾ ಹಾಗೂ ಪುನೀತ್ ಬಿಂಬಿಸಿದ್ದರು. ಸಾವಿನ ಘಟನೆಯ ಬಳಿಕ ಪುನೀತ್ ಹಾಗೂ ಶೈಲಜಾ ಆಟಾಟೋಪ ಮಿತಿಮಿರಿತ್ತು. ಪೊಲೀಸರಿಗೆ ಅನುಮಾನ ಬಂದು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ಇಬ್ಬರನ್ನೂ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.