ಹಿಜಾಬ್ ಧರಿಸಲು ಅವಕಾಶ ಕೊಡದಕ್ಕೆ ಪರೀಕ್ಷೆ ಬಿಟ್ಟು ಹೊರನಡೆದ ವಿದ್ಯಾರ್ಥಿಗಳೇ ಇದನ್ನು ಓದಿ
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. ಇಂದು ಆಂಗ್ಲ ಭಾಷೆ ಪರೀಕ್ಷೆ ನಡೆದಿದ್ದು ಹಿಜಾಬ್ ವಿವಾದ ಒಂದು ಕಡೆಯಾದ್ರೆ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶಿಕ್ಷಣವೇ ಜೀವನ ಪ್ರಮುಖ ಘಟ್ಟ ಎಂದು ಸಾರಿ ಹೇಳಿದ್ದಾರೆ. ಇದು ನಿಜಕ್ಕೂ ಮನಕಲಕುವಂತಿದೆ. ಹಾಸನ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸಾವಿನ ನೋವಿನಲ್ಲೂ ಪರೀಕ್ಷೆ ಬರೆದಿದ್ದಾರೆ.
ಚಿಕಿತ್ಸೆ ಫಲಿಸದೆ ತಂದೆ ಸಾವು..!
ಹಿರೆಕೇರೂರು ಪಟ್ಟಣದ ಸಂಗಮೇಶ್ವರ ಕಾಲೇಜಿನಲ್ಲಿ ಪರೀಕ್ಷೆ ಬರೆದ ಮಧು ಅಡಗಂಟಿ ಎಂಬ ವಿದ್ಯಾರ್ಥಿನಿ. ತಂದೆಯ ಸಾವಿನ ಸುದ್ದಿ ತಿಳಿದು ನೋವಿನಲ್ಲೇ ಪರೀಕ್ಷೆ ಬರೆದಿದ್ದಾರೆ. ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ತಂದೆ ಸಾವನ್ನಪ್ಪಿದ್ದು, ಪರೀಕ್ಷೆ ಮುಗಿಸಿ ಹೊರ ಬರುತ್ತಿದ್ದಂತೆ ತಂದೆ ನೆನೆದು ವಿದ್ಯಾರ್ಥಿನಿ ಕಣ್ಣೀರಿಟ್ಟಿದ್ದಾರೆ.
ಹೃದಯಾಘಾತದಿಂದ ತಾಯಿ ಕಳೆದುಕೊಂಡ ವಿದ್ಯಾರ್ಥಿ..!
ಇತ್ತ ಹೃದಯಾಘಾತದಿಂದ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಯೊಬ್ಬ ನೋವಿನಲ್ಲೇ ಪರೀಕ್ಷೆ ಬರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬೆಳಗ್ಗೆ ಹೃದಯಾಘಾತದಿಂದ ಸರಸ್ವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ತಾಯಿಯ ಸಾವಿನ ಸುದ್ದಿ ತಿಳಿದ ಯಶವಂತ ಸಂಶಿ ಎಂಬ ವಿದ್ಯಾರ್ಥಿ ನೋವಿನಲ್ಲೂ ಕೂಡ ಪರೀಕ್ಷೆ ಬರೆದಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳ ಮಾದರಿ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.