ಬೆಂಗಳೂರು: ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರುಗಡೆ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಭಾರತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಭರತ್ ಶೆಟ್ಟಿ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಪ್ರತಿಭಟನೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ತನ್ನ ಅನೇಕ ಸ್ನೇಹಿತರೊಂದಿಗೆ ಆಗಮಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಬಿ ಗುಣರಂಜನ್ ಶೆಟ್ಟಿ, ಯುವನಾಯಕ ಭರತ್ ಶೆಟ್ಟಿ ನೇತೃತ್ವದ ಈ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು ಪ್ರತಿಯೊಂದು ಭಾಷೆಗೂ ಮಾನ್ಯತೆ ಮತ್ತು ಗೌರವ ಕೊಡುವುದು ನಮ್ಮೆಲ್ಲರ ಧರ್ಮ. ಅದರಂತೆ ತುಳು ಭಾಷೆಗೂ ಅದರದ್ದೇ ಆದ ಮಹತ್ವ ಇದ್ದು ಪುರಾತನ ಕಾಲದಿಂದಲೂ ತುಳು ಭಾಷೆಗೆ ಹಾಗೂ ತುಳುನಾಡಿನ ಮಂದಿಗೆ ವಿಶೇಷ ಸ್ಥಾನಮಾನವಿದೆ.
ತುಳು ಅಪ್ಪೆನ ಎಲ್ಲಾ ಮಕ್ಕಳು ಜಾತಿ ಮತ ರಾಜಕೀಯ ಬಿಟ್ಟು ಎಲ್ಲರು ಒಗ್ಗಟ್ಟಾಗಿ ಈ ಕಾರ್ಯಕ್ಕೆ ಬೆಂಬಲ ಸೂಚಿಸಬೇಕು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರುವವರೆಗೂ ಹೋರಾಡಬೇಕು ಎಂದರು. ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಎಲ್ಲಾ ಯುವಕರು ಹೋರಾಟಕ್ಕೆ ಜಯ ಸಿಗುವವರೆಗೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಯುವಜನತೆಗೆ ಸಲಹೆ ನೀಡಿದರು.
ಈ ಸಂರ್ಧದಲ್ಲಿ ಭಾರತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಭರತ್ ಶೆಟ್ಟಿ, ಯುವ ನೇತಾರ ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ಬಾಲಚಂದರ್, ಉಮೇಶ್ ಪೂಂಜ, ತುಳುವೆರೆ ಚಾವಡಿ ರಿ. ಬೆಂಗಳೂರು ಇದರ ಅಧ್ಯಕ್ಷರಾದ ಆಶಾನಂದ ಕುಲಶೇಖರ್ ಜಯ ಕರ್ನಾಟಕ ಜನಪರ ವೇದಿಕೆಯ ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್, ಉದಯ ಶೆಟ್ಟಿ, ಸೇರಿದಂತೆ ತುಳುನಾಡಿನ ಅನೇಕ ಗಣ್ಯರು ಭಾಗಿಯಾಗಿದ್ದರು.