



ತನ್ನ ಜಾಗದಲ್ಲಿ ಹಸು ಮೇಯುತ್ತಿದೆ ಎಂಬ ಕಾರಣಕ್ಕೆ ಎಸ್ಟೇಟ್ ಮಾಲೀಕ ಸುಗಳನ್ನು ಗುಂಡಿಟ್ಟು ಕೊಂದ ಘಟನೆ ನಡೆದಿದೆ. ಮಡಿಕೇರಿಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಹಸುಗಳು ಹುಲ್ಲು ಮೇಯುತ್ತಾ, ನರೇಂದ್ರ ನಾಯ್ಡು ಎಂಬುವವರ ಎಸ್ಟೇಟ್ಗೆ ನುಗ್ಗಿದೆ. ಇದರಿಂದ ಕೋಪಗೊಂಡ ಎಸ್ಟೇಟ್ ಮಾಲೀಕ ಮೂರು ಹಸುಗಳಲ್ಲಿ ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿದ್ದಾನೆ.
ಸಿ.ಕೆ.ಮಣಿ ಎಂಬುವರಿಗೆ ಸೇರಿದ ಹಸುಗಳಾಗಿದ್ದು, ಹಲವು ಹಸುಗಳನ್ನು ಸಾಕಿದ್ದ ಇವರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಮೇಯಲು ಬಿಟ್ಟಿದ್ದ ಮೂರು ಹಸುಗಳ ಪೈಕಿ ಒಂದು ಮಾತ್ರ ಮನೆಗೆ ಹಿಂದಿರುಗಿತ್ತು. ಆ ಹಸು ಕೂಡ ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ನಂತರ ಹಸುವಿಗೆ ಗುಂಡು ತಗುಲಿದ್ದು ಗೊತ್ತಾಗಿ ಚಿಕಿತ್ಸೆ ನೀಡಲಾಗಿದೆ. ಇನ್ನು ಉಳಿದ ಎರಡು ಹಸುಗಳು ಪಕ್ಕದ ಎಸ್ಟೇಟ್ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಬಂದಿದ್ದು. ಮಣಿ ಅವರು ಹುಡುಕಾಡಲು ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್ನಲ್ಲಿ ಹಸುಗಳ ದೇಹ ಪತ್ತೆಯಾಗಿತ್ತು.
ಹಸುಗಳ ದೇಹದ ಮೇಲೆ ಗುಂಡಿನ ಗುರುತುಗಳಿದ್ದು, ತನ್ನ ಹಸುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮಣಿ ಆರೋಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿ.ಕೆ.ಮಣಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಟೇಟ್ ಮಾಲೀಕನ ಹುಡುಕಾಟದಲ್ಲಿದ್ದಾರೆ. ಎಸ್ಟೇಟ್ ಮಾಲಿಕ ನರೇಂದ್ರ ನಾಯ್ಡು ತಲೆಮರೆಸಿಕೊಂಡಿದ್ದಾಗಿ ತಿಳಿದುಬಂದಿದೆ.