ದೇವರ ನಾಡು ಎಂದೇ ಪ್ರಸಿದ್ದ ಹೊಂದಿದ್ದ ಕೇರಳದಲ್ಲಿ ಮೂಢನಂಬಿಕೆಗೆ ಬಲಿಯಾಗಿ ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಶನಿವಾರ ನಡೆದ ತಪಾಸಣೆ ವೇಳೆ ತನಿಖಾ ತಂಡಕ್ಕೆ ಅನೇಕ ಸಂಗತಿಗಳು ಖಚಿವಾಗಿದ್ದು, ಅವುಗಳಲ್ಲಿ ಮಾನವ ಶವದ ಮಾಂಸವನ್ನು ತಿಂದಿರುವುದು ಸಹ ಒಂದು.
ವಾಮಾಚಾರಕ್ಕೆ ಬಲಿ ಕೊಟ್ಟ ಮಹಿಳೆಯರಿಬ್ಬರ ಶವದ ಮಾಂಸಗಳನ್ನು ತಿಂದಿರುವುದು ಶನಿವಾರ ನಡೆಸಿದ ಪೊಲೀಸ್ ತನಿಖೆಯಲ್ಲಿ ಖಚಿತವಾಗಿದೆ. ಆರೋಪಿಗಳು ತಮ್ಮ ಮನೆಯ ಫ್ರಿಡ್ಜ್ನಲ್ಲಿ ಮಾನವ ಶವದ ಮಾಂಸ ಇಟ್ಟಿದ್ದರು ಎಂಬ ಕುರುಹು ಸಿಕ್ಕಿದೆ. ಅಲ್ಲದೆ, ಆರೋಪಿ ಲೈಲಾ ಹೊರತುಪಡಿಸಿ, ಉಳಿದ ಆರೋಪಿಗಳು ಮಾಂಸ ತಿಂದಿರುವುದಾಗಿ ಮತ್ತು ಮಾಂಸವನ್ನು ಫ್ರೆಜರ್ ಕುಕ್ಕರ್ನಲ್ಲಿ ಬೇಯಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಸುಮಾರು 10 ಕೆಜಿ ಮಾನವ ಶವದ ಮಾಂಸವನ್ನು ಆರೋಪಿಗಳನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ ಸಾಕ್ಷಿಗಳು ಸಾಬೀತು ಮಾಡಿವೆ. ಬಲಿಯಾದ ಇಬ್ಬರು ಮಹಿಳೆಯರ ದೇಹದ ಕೆಲವು ಭಾಗಗಳು ಮತ್ತು ಒಳ ಅಂಗಾಂಗಳನ್ನು ಫ್ರಿಡ್ಜ್ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ನಂತರ ಆರೋಪಿಗಳು ಅದನ್ನು ಮತ್ತೊಂದು ಹೊಂಡಕ್ಕೆ ಸ್ಥಳಾಂತರಿಸಿದ್ದಾರೆ. ಫ್ರಿಡ್ಜ್ನಲ್ಲಿ ಪತ್ತೆಯಾದ ರಕ್ತದ ಕಲೆಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.
ಪೊಲೀಸರ ಪ್ರಕಾರ, ಮೂವರು ಆರೋಪಿಗಳು ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಂದಿದ್ದಾರೆ. ಕೊಲೆಯನ್ನು ಯಾವ ರೀತಿ ಮಾಡಲಾಯಿತು ಎಂದು ಪೊಲೀಸರು ಆರೋಪಿಗಳ ಕರೆದೊಯ್ದು ನಡೆಸಿದ ಡಮ್ಮಿ ಪರೀಕ್ಷೆಯ ವೇಳೆ ಎಲ್ಲವನ್ನು ವಿವರಿಸಿದ್ದಾರೆ. ಸಾಕ್ಷ್ಯ ಸಂಗ್ರಹದ ವೇಳೆ ಪ್ರಮುಖ ಆರೋಪಿ ಶಫಿ ಯಾವುದೇ ಪಶ್ಚಾತ್ತಾಪ ಪಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಾಮಾಚಾರಕ್ಕೆ ಬಲಿಯಾದ ಮಹಿಳೆಯರಿಬ್ಬರನ್ನು ಪದ್ಮಾ ಮತ್ತು ರೋಸ್ಲಿ ಎಂದು ಗುರುತಿಸಲಾಗಿದೆ. ದಿಢೀರ್ ಶ್ರೀಮಂತರಾಗುವ ದುರಾಸೆಯಿಂದ ಪ್ರಮುಖ ಆರೋಪಿ ಶಫಿ ಜೊತೆ ಸೇರಿಕೊಂಡು ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ದುಷ್ಕೃತ್ಯ ಎಸಗಿದ್ದಾರೆ. ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದರು. ನರಬಲಿ ಮಾಡಿದರೆ ಅಪಾರ ಸಂಪತ್ತು ಪಡೆಯಬಹುದು ಎಂಬ ಶಫಿಯ ಮಾತನ್ನು ನಂಬಿದ ಆರೋಪಿ ದಂಪತಿ ಆತನಿಗೆ ಒಂದೂವರೆ ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಿದ್ದರು. ಹಣಕಾಸಿನ ತೊಂದರೆಯಿಂದ ಹೊರಬರಬಂದು, ಆರ್ಥಿಕ ಏಳಿಗೆ ಸಾಧಿಸಬಹುದೆಂಬ ಆಸೆಗೆ ಬಿದ್ದು ದಂಪತಿ ಈ ಕೃತ್ಯ ಎಸಗಿದ್ದು, ಪೊಲೀಸ್ ತನಿಖೆಯಲ್ಲಿ ಭಯಾನಕ ಸಂಗತಿಗಳು ಹೊರಬರುತ್ತಿವೆ. ಈ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನಲ್ಲಿ ನಡೆದಿದೆ.