ಆನೆಗಳು ದಾಳಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಕಡೆ ಆನೆಗೆ ಸಿಕ್ಕಾಬಟ್ಟೆ ಹಸಿವು ಆಗಿದೆ ಅಂತ ಅನಿಸುತ್ತೆ. ರಾತ್ರಿ ವೇಳೆ ಬಂದ ಗಜರಾಜ ಪಡಿತರ ಅಕ್ಕಿಯನ್ನು ತಿಂದು ಹೋಗಿದೆ.
ಆನೆಯೊಂದು ಸೊಸೈಟಿಯ ಪಡಿತರ ಅಕ್ಕಿಯನ್ನು ಇಡುವ ಕೋಣಿಗೇ ನುಗ್ಗಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನುಗ್ಗಿದ ಆನೆ ಅಲ್ಲಿದ್ದ ಅಕ್ಕಿಯನ್ನು ತಿಂದು ಹೋಗಿದೆ.
ಬುಧವಾರ ಮುಂಜಾನೆ 4.15ರ ಸಮಯದಲ್ಲಿ ಗ್ರಾಮಕ್ಕೆ ಬಂದಿರುವ ಕಾಡಾನೆ ಸಹಕಾರ ಸಂಘದ ಹಿಂದಿನ ಮತ್ತು ಮುಂದಿನ ಎರಡೂ ಬಾಗಿಲನ್ನು ಒಡೆದು ಅಕ್ಕಿ ತಿಂದಿದೆ. ರೆಡಿಯೋ ಕಾಲರ್ ಅಳವಡಿಸಿರುವ ಕಾಡಾನೆ ಹದಿಮೂರು ಚೀಲ ಅಕ್ಕಿಯನ್ನು ಎಳೆದಾಡಿದ್ದು ಸುಮಾರು ನಾಲ್ಕು ಚೀಲ ಅಕ್ಕಿಯನ್ನು ತಿಂದು ಹೋಗಿದೆ.
ಮಂಗಳವಾರವಷ್ಟೇ ಅಕ್ಕಿ ಬಂದಿತ್ತು..!
ಸೊಸೈಟಿಯಲ್ಲಿ ಪಡಿತರ ವಿತರಣಿಗಾಗಿ ಅಕ್ಕಿ ಸಂಗ್ರಹಿಸಲಾಗಿತ್ತು. ಮಂಗಳವಾರವಷ್ಟೇ ಅಕ್ಕಿ ಲೋಡ್ ಬಂದಿತ್ತು. ಬುಧವಾರ ಬೆಳಗ್ಗೆ ಸೊಸೈಟಿಯ ಕಾರ್ಯದರ್ಶಿ ಸತೀಶ್ ಎಂಬುವವರು ಕಚೇರಿಗೆ ಬಂದಾಗ ಎರಡೂ ಕಡೆಯ ಬಾಗಿಲು ಮುರಿದಿದ್ದು ಕಂಡುಬಂತು. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಕಾಡಾನೆ ದಾಂಧಲೆ ಬೆಳಕಿಗೆ ಬಂತು.