ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕೊಪ್ಪಳದ ವಿದ್ಯಾರ್ಥಿನಿಯೊಬ್ಬಳು “ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ” ಎಂದು ಸವಾಲು ಹಾಕಿದ ಘಟನೆ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧಿಸಿದ್ದಕ್ಕೆ ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ತಿರುಗಿ ಬಿದ್ದಿದ್ದಾಳೆ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ. ನಾವು ಮೊಟ್ಟೆ ತಿಂದು, ಸ್ನಾನ ಮಾಡಿ ನಿಮ್ಮ ಮಠಕ್ಕೆ ಬಂದಿಲ್ಲವಾ? ಮತ್ತೆ ದಕ್ಷಿಣೆಯನ್ನು ಹಾಕಿಲ್ಲವಾ? ಮತ್ತೆ ಏಕೆ ನೀವು ನಮ್ಮ ದುಡ್ಡಿನಲ್ಲಿ ತಿನ್ನುತ್ತೀರಾ? ಬಿಸಾಕಿ ಆ ದುಡ್ಡು ಅಥವಾ ನಮಗೆ ತಂದು ಕೊಡಿ ಎಂದು ಕಿಡಿಕಾರಿದ್ದಾಳೆ.
ಮಕ್ಕಳು ದೇವರು ಸಮಾನ ಅಂತಾರೆ ಹಾಗಾದರೆ ದೇವರ ಆಸೆ ಏಕೆ ಈಡೇರಿಸಲ್ಲ. ಮಠಕ್ಕೆ ಬಂದು ದಕ್ಷಿಣೆ ಹಾಕಿಲ್ವಾ? ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದರೂ ಇಳಿಯುತ್ತೇವೆ. ನಮಗೆ ಯಾರು ಎಲ್ಲ ಎಂದು ತಿಳಿದುಕೊಳ್ಳಬೇಡಿ. ನಮಗೆ ಎಸ್ಎಫ್ಆರ್ ಸಂಸ್ಥೆ ಇದೆ. ನಮಗೆ ಮೊಟ್ಟೆ ಮತ್ತೆ ಬಾಳೆಹಣ್ಣು ಬೇಕು. ಅದನ್ನು ಕೇಳಲು ನೀವು ಯಾರು? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ.
ನಿಮಗೆ ಬಡವರ ಕಷ್ಟ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಬಡತನವಿರುವುದರಿಂದ ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತೇವೆ. ನಿಮ್ಮ ಮಠಕ್ಕೆ ಜಿಲ್ಲೆಯ ಎಲ್ಲ ಮಕ್ಕಳು ಬಂದ್ರೆ ನಿಮ್ಮ ಮಠ ಉಳಿಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ. ಪ್ರಸ್ತುತ ಈ ವಿದ್ಯಾರ್ಥಿನಿಯ ಹೇಳಿಕೆ ಈಗ ಫುಲ್ ವೈರಲ್ ಆಗಿದೆ.