ದಕ್ಷಿಣ ಕನ್ನಡ: ಕೇರಳದಲ್ಲಿ ನಿಫಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ಕೇರಳದ ಗಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳದ ಗಡಿ ಭಾಗದಿಂದ ಸಾಕಷ್ಟು ಜನರು ಆರೋಗ್ಯ ಹಾಗೂ ಶಿಕ್ಷಣ ಸಂಬಂಧಿಸಿದಂತೆ ಮಂಗಳೂರಿನ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ. ಸಂಬಂಧಪಟ್ಟವರು ಕೂಡಲೇ ಮುಂಜಾಗ್ರತ ಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ಕೇರಳದಲ್ಲಿ ಸದ್ಯ ಇಬ್ಬರು ಆರೋಗ್ಯ ಸಿಬ್ಬಂದಿಗೆ ನಿಫಾ ಹರಡಿರುವ ಮಾಹಿತಿ ಸಿಕ್ಕಿದೆ. ಕಳೆದ ಭಾನುವಾರ ನಿಫಾದಿಂದ 12 ವರ್ಷ ವರ್ಷದ ಬಾಲಕ ಮೃತಪಟ್ಟಿದ್ದ. ಕೇರಳದಲ್ಲಿ ಈವರೆಗೆ ಒಟ್ಟಾರೆ, 11 ಮಂದಿಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಿಫಾ ವೈರಸ್ ಝೊನಟಿಕ್ ರೋಗವಾಗಿದ್ದು ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಅಲ್ಲದೆ ತೀವ್ರತರದ ಮಿದುಳಿನ ಉರಿಊತಕ್ಕೆ ಸಂಬಂಧಪಟ್ಟಂತೆ ತೀವ್ರ ರೋಗಲಕ್ಷಣ ಕಾಣಿಸಿಕೊಳ್ಳಬಹುದು ಹಾಗೂ ಮಾರಾಣಾಂತಿಕವಾಗಬಹುದು.