ನೆಲ್ಯಾಡಿ: ದ್ವಿಚಕ್ರ ವಾಹನ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಸಹಸವಾರೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ಮಹಿಳೆ ಕಡಬ ತಾಲೂಕು ಪೆರಾಬೆ ಗ್ರಾಮದ ಅತ್ರಿಮಜಲು ನಿವಾಸಿ ದಿನೇಶ ಎಂಬವರ ಪತ್ನಿ ಗೀತಾ (30) ಎನ್ನಲಾಗಿದೆ.
ಡಿ.15ರಂದು ಬೆಳಗ್ಗೆ ದಿನೇಶ, ಗೀತಾ ಹಾಗೂ ಅವರ ಇಬ್ಬರು ಮಕ್ಕಳು ದ್ವಿಚಕ್ರ ವಾಹನದಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ದ್ವಿಚಕ್ರ ವಾಹನ ರಸ್ತೆಯ ಬದಿ ಮಗುಚಿಬಿದ್ದಿದೆ. ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾಗಿದ್ದ ಗೀತಾರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ಸವಾರ ದಿನೇಶ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಗೀತಾರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ದಿನೇಶ ರವರ ಅಣ್ಣ ತಿಮ್ಮಪ್ಪ ಗೌಡರವರು ನೀಡಿದ ದೂರಿನಂತೆ ದ್ವಿಚಕ್ರ ವಾಹನ ಸವಾರ ದಿನೇಶರವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.