ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ 14 ಆರೋಪಿಗಳ ಬಂಧನ…!
ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿ 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ 14 ಮಂದಿ ಆರೋಪಿಗಳನ್ನು ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಮಡಿಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾವಿ ಕೆಲಸ ಮಾಡಿಕೊಂಡಿರುವ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಗೌಳಿಬೀದಿಯ ನಿವಾಸಿಯಾಗಿರುವ ನಿಜಾಮುದ್ದಿನ್ ಎಂಬುವವರು ವಿದ್ಯಾನಗರದ ರಾಶಿದ್ ಎಂಬುವವರ ಮನೆಯಲ್ಲಿ ಸ್ಯಾನಿಟರಿ ಕೆಲಸವಿರುವುದಾಗಿ ಹೇಳಿ ತೆರಳಿದ್ದಾರೆ. ಗುಂಡಿ ಕೆಲಸ ಯಾವುದೆಂದು ನೋಡುತ್ತಿದ್ದಾಗ ನಿಜಾಮುದ್ದಿನ್ ರವರ ಕೈ ಆಕಸ್ಮಿಕವಾಗಿ ಮಹಮ್ಮದ್ ರಾಶಿದ್ ರವರ ಪತ್ನಿಗೆ ತಗಲಿದೆ ಎನ್ನಲಾಗಿದೆ. ವಿಚಾರ ತಿಳಿದು ಮಹಮ್ಮದ್ ರಾಶಿದ್ ಮತ್ತು ಅವರ ತಂಡದವರು ನಿಜಾಮುದ್ದಿನ್ ರವರ ಮೇಲೆ ಹಲ್ಲೆ ಮಾಡಿದ್ದಾರೆ.
ಇದಾದ ಬಳಿಕ ಆರೋಪಿಗಳು ಗೌಳಿ ಬೀದಿಯಲ್ಲಿ ಹೋಗುತ್ತಿದ್ದ ನಿಜಾಮುದ್ದಿನ್ ರವರನ್ನು ಅಪಹರಿಸಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ, ಹಣ ನೀಡದಿದ್ದರೆ ನಿಜಾಮುದ್ದಿನ್ ರವರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಪ್ರಕರಣದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಮಡಿಕೇರಿ ನಗರ ಪೊಲೀಸರು 14 ಮಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಗಳು, ಒಂದು ಎಸ್ಬಿಬಿಎಲ್, ಒಂದು ಏರ್ ಪಿಸ್ತೂಲ್, ಒಂದು ಟಾಯ್ ಪಿಸ್ತುಲ್ ಹಾಗೂ ಎರಡು ಕತ್ತಿಗಳ, ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿ ಆರೋಪಿಗಳನ್ನು ಮಡಿಕೇರಿ ಕಾನ್ವೆಂಟ್ ಜಂಕ್ಷನ್ ನಿವಾಸಿ ಎಂ. ಜೆಡ್. ಮಹಮ್ಮದ್ ರಾಶಿದ್ (41), ಮಡಿಕೇರಿ ಗೌಳಿಬೀದಿಯ ಎಂ. ಜಿ. ಪ್ರಮೋದ್ (31), ಟಿ. ಆರ್. ದರ್ಶನ್ (48), ಮಡಿಕೇರಿ ಚಾಮುಂಡೇಶ್ವರಿ ನಗರದ ಬಿ. ಡಾಲಿ (48), ಮಕ್ಕಂದುರುವಿನ ಜೀವನ್ ಕುಮಾರ್ (25), ಮಹದೇವಪೇಟೆಯ ಟಿ. ಪಿ. ಮದನ್ ರಾಜ್ (34), ಕಡಗದಾಳುವಿನ ಎಸ್. ದರ್ಶನ್ (24), ಎಂ. ಆರ್. ಮಣಿಕಂಠ (24), ಮದೆನಾಡಿನ ಎಂ. ಜೆ. ಪುರುಷೋತ್ತಮ್ (21), ಮಡಿಕೇರಿ ಮಂಗಳಾದೇವಿ ನಗರದ ಎಸ್. ಎಸ್. ಕಿರಣ್ ರೈ (32), ಗಾಳಿಬೀಡಿನ ಪಿ. ಎಸ್. ಮಂಜು (23), ಇಬ್ಬನಿವಳವಾಡಿಯ ಟಿ.ಎಸ್. ಕೀರ್ತಿ (31), ಮಡಿಕೇರಿ ವಿದ್ಯಾನಗರದ ಎಸ್. ಸಂದೀಪ್ (37), ಮಡಿಕೇರಿ ಕಾನ್ವೆಂಟ್ ಜಂಕ್ಷನ್ ನ ತಬಸ್ಯ (36) ಎನ್ನಲಾಗಿದೆ.
ಆರ್.ವಿ. ಗಂಗಾಧರಪ್ಪ, ಡಿವೈಎಸ್ಪಿ, ಸೋಮವಾರಪೇಟೆ ಉಪ ವಿಭಾಗ, ಅನೂಪ್ ಮಾದಪ್ಪ, ಸಿಪಿಐ ಮಡಿಕೇರಿ ನಗರ ವೃತ್ತ, ಶ್ರೀನಿವಾಸ್, ಪಿಎಸ್ಐ ಮಡಿಕೇರಿ ನಗರ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವು ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಉತ್ತಮ ಕಾರ್ಯವನ್ನು ಪ್ರಶಂಸಿಸಲಾಗಿದೆ.