ಈ ವಿದ್ಯಾರ್ಥಿನಿ ಕಲಿಕೆಯಲ್ಲಿ ಮುಂದಿದ್ದಳು. ಆದರೆ ಗ್ರಹಚಾರ ಅನ್ನುವುದು ಹೇಗೆ ಬೇಕಾದರೂ ತಿರುಗಬಹುದು. ಈ ಸಮಯದಲ್ಲಿ ಕೈಗೊಳ್ಳುವ ದಿಟ್ಟನಿರ್ಧಾರಗಳು ಭವಿಷ್ಯವನ್ನು ರೂಪುಗೊಳಿಸುತ್ತದೆ. ಹೌದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿನಿ ಇಂದು ಪರೀಕ್ಷೆ ಬರೆಯಲು ತಾಯಿಯೊಂದಿಗೆ ಸ್ಕೂಟರ್ ಏರಿದ್ದಾಳೆ. ಆದರೆ ಮಾರ್ಗಮಧ್ಯೆಯೇ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಆದರೂ ಈಕೆ ಪರೀಕ್ಷೆ ಬರೆದಿದ್ದಾಳೆ..! ಹೇಗೆ ಅಂತೀರಾ ಮುಂದೆ ಓದಿ…
ಬೆಳ್ತಂಗಡಿ ತಾಲೂಕಿನ ಲೈಲಾ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ತಾಯಿ ಜೊತೆ ಹೋಗುತ್ತಿದ್ದಾಗ ರಸ್ತೆ ಅಪಘಾತ ನಡೆದಿದ್ದು ಗಾಯಗೊಂಡಿದ್ದಾಳೆ. ಆದರೆ ಶಾಲಾ ಆಡಳಿತ ಮಂಡಳಿಯು ತೋರಿದ ಸಮಯ ಪ್ರಜ್ಞೆಯು ವಿದ್ಯಾರ್ಥಿನಿಯ ಪಾಲಿಗೆ ಬೆಳಕಾಗಿದೆ. ವಿದ್ಯಾರ್ಥಿ ನಿಯಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ವಿದ್ಯಾರ್ಥಿನಿಯನ್ನು ಆಂಬುಲೆನ್ಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯಿಸಿದ್ದಾರೆ!
ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ -ಮಮತಾ ದಂಪತಿಯ ಪುತ್ರಿ ತನ್ವಿ(15) ಅಪಘಾತದಲ್ಲಿ ಸಿಲುಕಿದ ವಿದ್ಯಾರ್ಥಿನಿ. ಲೈಲಾ ಸೈ ಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ಮಮತಾ ಜೊತೆ ಸ್ಕೂಟರ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಅಪಘಾತ ಸಂಭವಿಸಿದೆ. ಸ್ಕೂಟರ್ ಸ್ಕಿಡ್ ಅಗಿ ಗಾಯಗೊಂಡಿದ್ದಾರೆ. ಅವರಿಗೆ ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ವಿಷಯ ತಿಳಿದ ಶಾಲೆಯ ಆಡಳಿತ ಮಂಡಳಿಯು 11:45 ರಿಂ ದ 2:45 ವರೆಗೆ ಪರೀಕ್ಷೆ ಬರೆಯಲು ತನ್ವಿಗೆ ವಿಶೇಷ ಅವಕಾಶ ಕಲ್ಪಿಸಿದ್ದಾರೆ. ಅದೇ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿಯ ದಾಖಲೆಗಳನ್ನು ನೀಡಿ, ಅಧಿಕಾರಿಗಳ ಅನುಮತಿ ಕೇಳಿಕೊಂಡು ಅವಕಾಶ ನೀಡಿದ್ದಾರೆ. ತನ್ವಿ ಹೇಳಿದನ್ನು ಒಂಭತ್ತನೇ ತರಗತಿ ವಿದ್ಯಾರ್ಥಿನಿ ಪತ್ರಿಕೆಯಲ್ಲಿ ಬರೆದಿದ್ದಾಳೆ. ಕೊಠಡಿಯಲ್ಲಿ ಒಬ್ಬ ನರ್ಸ್ ಮತ್ತು ಆಂಬುಲೆನ್ಸ್ ನಿಯೋಜನೆ ಮಾಡಿದ್ದಾರೆ. ಗಮನಾರ್ಹವೆಂದರೆ ಪರೀಕ್ಷೆ ಮುಗಿದ ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದು ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.