ಗ್ರಾಮಸ್ಥರು ಮುಂದಿನ ವಿಧಾನ ಸಭಾ ಚುನಾವಣೆಗೆ ಬಹಿಷ್ಕಾರ ಹಾಕಲು ಕಾರಣವೇನು ಗೊತ್ತೇ?
ಕಾಂಗ್ರೆಸ್ ಶಾಸಕರ ಶಿಷ್ಯನ ಗಣಿಗಾರಿಕೆಗೆ ಸ್ಥಳೀಯ ಬಿಜೆಪಿ ಮುಖಂಡನ ಸಾಥ್
ಪಾಂಡವರ ಕೋಟೆಯಲ್ಲಿ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣಿನ ಗಣಿಗಾರಿಕೆಯನ್ನು ತೀವ್ರವಾಗಿ ಖಂಡಿಸಿರುವ ಗ್ರಾಮಸ್ಥರು ಕಣ್ಣಿದ್ದು ಕುರುಡರಂತೆ ವರ್ತಿಸುವ ಜಿಲ್ಲಾಡಳಿತ, ಪುತ್ತೂರು ಶಾಸಕರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಮಾಡುವಂತೆ ಬ್ಯಾನರ್ ಅಳವಡಿಸಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಐತಿಹಾಸಿಕ ಪ್ರಸಿದ್ಧತೆಯನ್ನು ಪಡೆದ ಅಳಿಕೆ ಗ್ರಾಮದ ಕೋಟೆತ್ತಡ್ಕ ಪಾಂಡವರ ಕೋಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಹಿಂದೆ ಮರಳು ಮಾಫಿಯಾಗಳನ್ನು ನಡೆಸುತ್ತಿದ್ದ ಕಾಂಗ್ರೆಸ್ ಮಾಜಿ ಸಚಿವ, ಶಾಸಕರ ಶಿಷ್ಯರೊಬ್ಬರ ಗಣಿಗಾರಿಕೆಗೆ ಸ್ಥಳೀಯ ಬಿಜೆಪಿ ಮುಖಂಡ ಸಾಥ್ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ, ಹಾಗೂ ಚುನಾವಣಾ ಬಹಿಷ್ಕಾರಕ್ಕೆ ಕಾರಣವಾಗಿದೆ.
ಕಳೆದ ೨ ವರ್ಷಗಳಿಂದ ಈ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಸ್ಥಳೀಯ ಹೋರಾಟಗಾರರು ಹಲವು ರೀತಿಯಲ್ಲಿ ಹೋರಾಟ ನಡೆಸಿದ್ದರು. ಆದರೆ ಈಗ ರಾಜಕೀಯ ಮುಖಂಡರ ಒತ್ತಡಕ್ಕೆ ಮತ್ತು ಹಣದಾಸೆಗೆ ಮನಸೋತ ಈ ಹೋರಾಟಗಾರರು ಈ ಅಕ್ರಮ ಗಣಿಗಾರಿಕೆ ಸಾಥ್ ನೀಡುತ್ತಿರುವುದು ಹಾಗೂ ಇನ್ನೂ ಕೆಲವು ಸ್ಥಳೀಯ ಹೋರಾಟಗಾರರು ತಮಗೆ ಈ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲದಂತೆ ಮೌನಿಯಾಗಿರುವುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣಾ ಸಂದರ್ಭದಲ್ಲಿ ಮುಗ್ಧ ಗ್ರಾಮಸ್ಥರನ್ನು ಭರವಸೆಯ ಮಾತುಗಳ ಮೂಲಕ ಹಿಂದುತ್ವವನ್ನೆ ರಾಮ ಬಾಣವನ್ನಾಗಿಸಿ ಮತ ಕೇಳುವ ಹಿಂದು ಬಿಜೆಪಿ ಮುಖಂಡರು ಹಿಂದೂ ಪುರಾವೆಗಳುಳ್ಳ ಐತಿಹಾಸಿಕ ಪಾಂಡವರ ಕೋಟೆಯನ್ನು ರಕ್ಷಿಸುವ ಬದಲು ಭಕ್ಷಿಸಲು ಹೊರಟರೇ…? ತಮ್ಮ ಸ್ವಂತ ಲಾಭಕ್ಕಾಗಿ ಭೂ ತಾಯಿಯ ಭೂ ಗರ್ಭ ಅಗೆದು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಈ ರಾಜಕೀಯ ನಾಯಕರ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವವರಿಲ್ಲವೇ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳು, ಪುತ್ತೂರು ಶಾಸಕರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ತೀರ್ವವಾಗಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.