ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಏ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಬೆಳಿಗ್ಗೆ ಗಂಟೆ 9ರಿಂದ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಮಾವೇಶ ನಡೆಸಿ ಕಾಲ್ನಡಿಗೆಯ ಮೂಲಕ ಕೋರ್ಟು ರಸ್ತೆಯಲ್ಲಿ ಸಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ನಾಮಪತ್ರ ಸಲ್ಲಿಕೆ ಸಂದರ್ಭ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ವಿರುದ್ಧ ಕೇಸರಿ ಪಡೆ ಬಂಡಾಯ ನಡೆಸಿದ್ದು, ಹೀಗಾಗಿ ಚದುರಿ ಹೋಗಿರುವ, ಮನಸ್ಸುಗಳನ್ನು ಪಕ್ಷದೊಂದಿಗೆ ಮರು ಜೋಡಿಸಲು ಸಹಾಯವಾಗಬಲ್ಲ ಪ್ರಭಾವಿ ನಾಯಕರನ್ನು ತರಿಸಲು ಜಿಲ್ಲೆಯ ಜನತಾ ಪಾರ್ಟಿ ಪ್ರಯತ್ನ ನಡೆಸುತ್ತಿದೆ. ಇದರ ಜೊತೆಗೆ ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಪುತ್ತೂರಿನ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ಗೌಡ ಮೂಲತಃ ಮೂಲತಃ ಸುಳ್ಯದವರು. ಸುಳ್ಯದಲ್ಲಿ ಸಕ್ರಿಯ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿದ್ದರು. ಆಶಾ ತಿಮ್ಮಪ್ಪ ಅವರು 1980ರಿಂದ ಸುಳ್ಯದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದವರು.
ಹಿರಿಯ ರಾಜಕಾರಣಿಯಾಗಿರುವ ಆಶಾ ತಿಮ್ಮಪ್ಪಗೌಡರವರು ಈವರೆಗೆ ಚುನಾವಣಾ ರಾಜಕೀಯದಲ್ಲಿ ಸೋತ ಇತಿಹಾಸವಿಲ್ಲ. 1996ರಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ, 2005 ರಲ್ಲಿ ನೆಲ್ಯಾಡಿ, 2011ರಲ್ಲಿ ಸುಳ್ಯದ ಬೆಳ್ಳಾರೆ, 2016ರಲ್ಲಿ ಗುತ್ತಿಗಾರು ಕ್ಷೇತ್ರದಿಂದ ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. 2014ರಿಂದ ಎರಡೂವರೆ ವರ್ಷ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆರಾಗಿದ್ದವರು, ಸುಳ್ಯದ ಮಹಿಳಾ ಮೋರ್ಚಾ ಅಧ್ಯಕ್ಷೆ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಆಶಾ ತಿಮ್ಮಪ್ಪ ಕಡಬ ತಾಲೂಕಿನ ಕುಂತೂರು ಗ್ರಾಮದ ತಿಮ್ಮಪ್ಪ ಗೌಡ ಕುಂಡಡ್ಕ ಅವರ ಪತ್ನಿ. ತಿಮ್ಮಪ್ಪ ಗೌಡ ಕುಂಡಡ್ಕ ಅವರು ಸುಳ್ಯದಲ್ಲಿ ಉದ್ಯಮಿಯಾಗಿದ್ದರು. ಪ್ರಸ್ತುತ ಕುಂತೂರಿನಲ್ಲಿ ನೆಲೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಬಳಿಕ ಸುಳ್ಯ ಮೂಲದವರಾದ ಆಶಾ ತಿಮ್ಮಪ್ಪ ಅವರಿಗೆ ಬಿಜೆಪಿ ಟಿಕೆಟ್ ಒಲಿದು ಬಂದಿದೆ.