ಪುತ್ತೂರು: ಅಂತರ್ ರಾಜ್ಯ ಕುಖ್ಯಾತ ದಂತ ಚೋರರನ್ನು ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಪುತ್ತೂರು ವಲಯದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಶಿಕುಮಾರ್, ಸತೀಶ್, ವಿಜ್ಞೇಶ್, ವಿನಿತ್, ಸಂಪತ್ ಕುಮಾರ್ ಮತ್ತು ರತೀಶ ಎನ್ನಲಾಗಿದೆ. ಇವರು ಅಂತರ್ ರಾಜ್ಯ ಕುಖ್ಯಾತ ದಂತ ಕಳ್ಳರಾಗಿದ್ದಾರೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್ ಬಳಿ ವಾಹನ ಅಡ್ಡಗಟ್ಟಿ ಆನೆ ದಂತ ಮತ್ತು ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೈ.ಪಿ. ಕಾರ್ಯಪ್ಪ ರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಕಿರಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್.ಎನ್., ಶಿವಾನಂದ್ ಆಚಾರ್ಯ, ಪ್ರಕಾಶ್ ಬಿ.ಟಿ., ಕುಮಾರಸ್ವಾ ಮಿ, ಮೆಹಬೂಬ್ಪ್ರಸಾದ್, ಅರಣ್ಯ ರಕ್ಷಕರುಗಳಾದ ನಿಂಗರಾಜ್, ಸುಧೀರ್, ಸತ್ಯನ್, ದೀಪಕ್, ಉಮೇಶ್, ಇಲಾಖೆಯ ವಾಹನ ಚಾಲಕರಾದ ಜಗದೀಶ್ ಮತ್ತು ರೋಹಿತ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.