ಪುತ್ತೂರು: ಇಂದಿನಿಂದ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿ ಪಥ್ ನೇಮಕಾತಿ 2022 ರ ಅಡಿಯಲ್ಲಿ ‘ಅಗ್ನಿ ವೀರ’ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಪುತ್ತೂರಿನ ವಿದ್ಯಾ ಮಾತಾ ಅಕಾಡೆಮಿಯ ವತಿಯಿಂದ ತರಬೇತುಗೊಂಡ ಸುಮಾರು 95ಮಂದಿ ಅಭ್ಯರ್ಥಿಗಳನ್ನು ಆ.31ರಂದು ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ತನ್ನ ನೇತೃತ್ವದ ಉಚಿತ ಬಸ್ ಸೌಲಭ್ಯದಲ್ಲಿ ಕಳುಹಿಸಿಕೊಡಲಾಯಿತು.
ಬೆಳಿಗ್ಗೆ ದೇವಳದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಬಳಿಕ 95 ಅಭ್ಯರ್ಥಿಗಳಿಗೆ ದೇವಳದಿಂದ ಫಲಹಾರ ನೀಡಿ ಬಳಿಕ ನೇಮಕಾತಿಗೆ ಕಳುಹಿಸಿಕೊಡಲಾಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದೆ ಸೈನ್ಯಕ್ಕೆ ಸೇರಬೇಕಾದರೆ ಒಂದಷ್ಟು ಪೂರ್ವಭಾವಿ ತರಬೇತಿ, ಶ್ರಮ ಬೇಕಿತ್ತು. ಆದರೆ ಒಬ್ಬ ಸಾಮಾನ್ಯ ಯುವಕ ಕೂಡಾ ಸೈನ್ಯಕ್ಕೆ ಸೇರಿ ದೇಶದ ಗಡಿ ಕಾಯುವ ಸೇವೆ ಮಾಡಲು ಇವತ್ತು ಅಗ್ನಿ ಪಥ್ ಯೋಜನೆ ಸಹಕಾರಿಯಾಗಿದೆ. ಇದನ್ನು ಸದುಪಯೋಗ ಮಾಡಿಕೊಂಡು ಎಲ್ಲರು ಭಾರತ ಮಾತೆಯ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ವಿದ್ಯಾ ಮಾತಾ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತಿತ್ತರರು ಉಪಸ್ಥಿತರಿದ್ದರು.