ಬಿಜೆಪಿ ಅಭ್ಯರ್ಥಿಯನ್ನು ಸುಲಭವಾಗಿ ಸೋಲಿಸಬಹುದು ಎಂಬ ಕಾಂಗ್ರೆಸ್ ಲೆಕ್ಕಾಚಾರ..!
ಪುತ್ತೂರು: ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮಹಿಳಾ ಅಭ್ಯರ್ಥಿಗೆ ಸ್ಥಾನ ನೀಡಿದ ಹಿನ್ನೆಲೆ ಮಾಜಿ ಶಾಸಕಿ ಶಕುಂತಳ ಟಿ ಶೆಟ್ಟಿ ಸಹಿತ 8ಮಂದಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಗಳು ಮಾಜಿ ಸಿಎಂ ಸಿದ್ದರಾಮಯ್ಯರವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಿದ್ಧರಾಮಯ್ಯರವರು ಇವರನ್ನು ಮುಖತಃ ಭೇಟಿ ಆಗಲಿಲ್ಲ ಎನ್ನುವ ಮಾಹಿತಿ ಇದೆ.
ಪುತ್ತೂರಿನ ಕಾಂಗ್ರೇಸ್ ಅಭ್ಯರ್ಥಿಯಾಗಿ ಈಗಾಗಲೇ ಅಶೋಕ್ ಕುಮಾರ್ ರೈ ಹೆಸರು ಅಂತಿಮಗೊಂಡಿದೆ. ಬಿಜೆಪಿ ಬಾಹುಳ್ಯ ಕ್ಷೇತ್ರದಲ್ಲಿ ಕಾಂಗ್ರೇಸ್ನಿಂದ ಸುಮಾರು 13ಮಂದಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಅನ್ನುವ ನಿಟ್ಟಿನಲ್ಲಿ ಕಾಂಗ್ರೇಸ್ ನಾಯಕರು ಸುಮ್ಮನಿದ್ದರು. ಇನ್ನೇನು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಹೆಸರು ಕೇಳಿ ಬರುತ್ತಿದಂತೆ ಈ ಎಲ್ಲಾ ಆಕಾಂಕ್ಷಿಗಳು ಮುಗಿಬಿದ್ದು ಅದರಲ್ಲಿ 8ಜನ ಅಭ್ಯರ್ಥಿಗಳು ಬೆಂಗಳೂರಿಗೆ ತೆರಳಿ ನಮ್ಮ ಪಕ್ಷದಲ್ಲಿಯೇ ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದವರಿಗೆ ಟಿಕೆಟ್ ನೀಡಬೇಕು ತಮಗೆ ಬೇಕೆಂದು ಲಾಭಿ ನಡೆಸುತ್ತಿದ್ದಾರೆ.
ಸಿದ್ಧರಾಮಯ್ಯನವರು ಸಿಗದ ಹಿನ್ನಲೆಯಲ್ಲಿ ಶಕುಂತಳ ಟಿ ಶೆಟ್ಟಿ ಸಹಿತ 8ಜನ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಗಳ ತಂಡ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಅವರ ಮುಂದಿಟ್ಟಿದ್ದಾರೆ. ಮನವಿಯನ್ನು ಆಲಿಸಿದ ಡಿ.ಕೆ ಶಿವಕುಮಾರ್ ಈ ಬಗ್ಗೆ ಚರ್ಚಿಸಿ ಸೂಚಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲದೇ ಎಲ್ಲರು ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.