ಪುತ್ತೂರು: ತಾಲೂಕಿನ ಪುತ್ತಿಲದ ಮದ್ರಸಾ ಶಾಲೆಯೊಂದರಲ್ಲಿ ಉಸ್ತಾದ್ ಒಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ನೀಡಿರುವ ಘಟನೆ ಪುತ್ತೂರು ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಕುಂಡಡ್ಕ ಮದ್ರಾಸದ ಉಸ್ತಾದ್ ಸಿರಾಜುದ್ದೀನ್ ಮದನಿ ಎಂದು ಗುರುತಿಸಲಾಗಿದೆ.
ಪುತ್ತಿಲ ಗ್ರಾಮದ ಕುಂಡಡ್ಕ ನಿವಾಸಿ ಮಹಿಳೆಯೊಬ್ಬರ ಇಬ್ಬರು ಹೆಣ್ಣು ಮಕ್ಕಳು ಕುಂಡಡ್ಕದ ಮದ್ರಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ 28 ನೇ ತಾರೀಖಿನಂದು ರಾತ್ರಿಯ ವೇಳೆ ಶಾಲೆ ಮುಗಿಸಿ ಮಕ್ಕಳಿಬ್ಬರು ಮನೆಗೆ ಬಂದು ತಾಯಿಗೆ ಉಸ್ತಾದ್ ಮಾಡಿರುವ ನೀಚ ಕೆಲಸದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಹೆಣ್ಣು ಮಕ್ಕಳು ಧರಿಸಿದ್ದ ಬಟ್ಟೆ ಸರಿಸಿ ಮೈ ಮುಟ್ಟಿ ದೇಹವೆಲ್ಲ ಸವರಿದ್ದಲ್ಲದೇ ಅಪ್ಪಿ ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಏನಾದರೂ ಕಾರಣ ಹೇಳಿ ಉಸ್ತಾದ್’ನ ರೂಮಿಗೆ ಕರೆಸಿಕೊಂಡು ಜನನಾಂಗವನ್ನು ಮುಟ್ಟಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಈ ರೀತಿ ಅಸಭ್ಯವಾಗಿ ವರ್ತಿಸಿರುವುದಾಗಿ ಹೆಣ್ಣು ಮಕ್ಕಳು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿ ಉಸ್ತಾದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಇನ್ಸ್ಪೆಕ್ಟರ್ ಎಂ.ಎನ್. ರಾವ್ ಮತ್ತು ಎಸ್.ಐ. ಸೇಸಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.