Friday, May 17, 2024
spot_imgspot_img
spot_imgspot_img

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಕೆಡ್ಡಸ ಹಬ್ಬ ಆಚರಣೆ

- Advertisement -G L Acharya panikkar
- Advertisement -

ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.


ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಇವರ ಉಪಸ್ಥಿತಿಯಲ್ಲಿ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಿಶಿನ-ಕುಂಕುಮ, ಪಚ್ಚೆಹೆಸರು ಪುಡಿ, ವೀಳೆದ್ಯೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನ ಕೋಸ್ಕರ ಇಟ್ಟು ಹುರುಳಿ, ಹೆಸರುಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು (ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿ ಹಾಗೂ ಸುಶೀಲ ರವರು ಭೂಮಿಗೆ ಎಣ್ಣೆ,ಹಾಲು ಹಾಕಿ ಬಡಿಸಿದರು‌. ಈ ಸಂದರ್ಭದಲ್ಲಿ ಅಧ್ಯಾಪಕರು ವೃಂದದವರು ಸಹಕರಿಸಿದರು.


ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪ್ರೀತಾರವರು ಕೆಡ್ಡಸದ ಮಹತ್ವವನ್ನು ತಿಳಿಸುತ್ತಾ “ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂಧಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ಫಲಾಪೇಕ್ಷೆ ಆಶಯದಿಂದ ಇದು ಆಚರಣೆಯಾಗುತ್ತದೆ. ಇದು ತುಳು ತಿಂಗಳ ಪುನ್ನಿ (ಮಕರ) 27ಕ್ಕೆ ಭೂಮಿ ದೊಡ್ಡ ವಾದಳೆಂಬ ಎಂಬ ನಂಬಿಕೆ. ಕೆಡ್ಡಸ ಆಚರಣೆಯನ್ನು ಭೂಮಿತಾಯಿಯು ಸಾಮಾನ್ಯ ಸ್ತ್ರೀ ಎಂಬಂತೆ ಪರಿಭಾವಿಸಿದ್ದಾರೆ.

ಹೆಣ್ಣಿನಂತೆ ಭೂಮಿಯು ರಜೋಮಯೋವಾಗುತ್ತಾಳೆ ಎಂದು ಭಾವಿಸಿ, ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಗಳಲ್ಲಿ ಶುರು ಕೆಡ್ಡಸ, ನಡು ಕೆಡ್ಡಸ, ಮತ್ತು ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಣೆ ಮಾಡುತ್ತಾರೆ. ಕೆಡ್ಡಸದ ಎರಡನೇ ದಿನ ಬೇಟೆ ಸಂಸ್ಕೃತಿಯೂ ಇತ್ತು, ಇದು ಕೃಷಿಯ ಸಂರಕ್ಷಣಾ ವಿಧಾನವಾಗಿದೆ. ತುಳುನಾಡಿನ ಜನರು ಪ್ರಕೃತಿಯ ಆರಾಧಕರಾಗಿ ರುವುದರಿಂದ ಈ ಆಚರಣೆಯನ್ನು ತಲತಲಾಂತರದಿಂದ ಮಾಡಿಕೊಂಡು ಬರಲಾಗಿದೆ.

ಈ ಸಮಯದಲ್ಲಿ ಪ್ರಕೃತಿ ಕೂಡ ತೆನೆ ಬಿಡಲು ಸಜ್ಜಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ನೇಪಥ್ಯಕ್ಕೆ ಸರಿದಿರುವುದು ಖೇದಕರ. ಮನೆಮನೆಯಲ್ಲಿಯೂ ಈ ಆಚರಣೆಯಿಂದ ಭೂಮಿಯ ಬಗ್ಗೆ ಗೌರವ ಮೂಡುವುದಲ್ಲದೇ ಹೆಣ್ಣನ್ನು ಭೂಮಿಗೆ ಆರೋಪಿಸುವ ಒಳಾರ್ಥ ದೊಂದಿಗೆ ಪ್ರತಿಯೊಬ್ಬರು ಪ್ರಕೃತಿಯನ್ನು ಗೌರವಿಸುತ್ತಾರೆ. ಕೆಡ್ಡಸ ಕೇವಲ ಆಚರಣೆ ಮಾತ್ರವಲ್ಲ ಅಧ್ಯಯನ ವಿಷಯವಾಗಿದೆ.

“ಶಾಲೆಯಲ್ಲಿ ಇಂತಹ ಆಚರಣೆ ಮಾಡಿರುವಂತದ್ದು ನಿಜವಾಗಿಯೂ ತುಳುನಾಡಿನ ಪದ್ಧತಿ ಉಳಿಸಿದಂತೆ. ವಿದ್ಯಾರ್ಥಿಗಳು ಈ ಆಚರಣೆಯನ್ನು ಮನೆಯಲ್ಲಿಯೂ ಹಿರಿಯರೊಂದಿಗೆ ಸೇರಿ ಮಾಡುವುದರೊಂದಿಗೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಆಚರಣೆಗಳಿಂದ ಆಗಬೇಕು ” ಎಂದು ಊರಿನ ಹಿರಿಯ ತಾಯಿಯಾದ ಜಯಂತಿ ಅವರು ನುಡಿದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೆಡ್ಡಸದ ವಿಶೇಷತೆ ತಿಳಿಸುವ ಗೀತೆ ಹಾಡಿದರು. ತಬಲದಲ್ಲಿ 6ನೇ ತರಗತಿಯ ಸುಶಾಂತ್ ಹಾಗೂ ಹಾರ್ಮೋನಿಯಂನಲ್ಲಿ ಏಳನೇ ತರಗತಿಯ ದುರ್ಗಾ ಶರಣ್ ಸಹಕರಿಸಿದರು. ಕೆಡ್ಡಸದ ವಿಶೇಷ ತಿನಿಸಾದ ನವವಿಧ ಧಾನ್ಯಗಳಿಂದ ತಯಾರಿಸಿದ ನನ್ಯೆರಿಯನ್ನು ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚಲಾಯಿತು.


ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಜಯರಾಮ ರೈ, ಊರಿನ ಹಿರಿಯರಾದ ಜಯಂತಿ ಹಾಗೂ ಸುಶೀಲ, ಮಾತೃಭಾರತೀಯ ಸದಸ್ಯರು ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವಾಸವಿ ಕೆ ಸಿ ನಿರೂಪಿಸಿ, ಭೂಷಣ್ ಸ್ವಾಗತಿಸಿ, ಚಂದ್ರಕಲ ವಂದಿಸಿದರು.

- Advertisement -

Related news

error: Content is protected !!