ಪುತ್ತೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಿರಿಚಾವಡಿ ಯುವ ಸಾಧಕ ಪುರಸ್ಕಾರಕ್ಕೆ ಪುತ್ತೂರಿನ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಆಯ್ಕೆಯಾಗಿದ್ದಾರೆ.
ಸಿರಿಚಾವಡಿ ಯುವಸಾಧಕ ಪುರಸ್ಕಾರ ಕಾರ್ಯಕ್ರಮದಲ್ಲಿ ಬೇರೆ ಬೇರೆ ವಿಭಾಗದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಪುರಸ್ಕಾರ ನಡೆಯಲಿದ್ದು, ಸಿರಿಚಾವಡಿ ಯುವ ಸಾಧಕ ಪುರಸ್ಕಾರಕ್ಕೆ ಪುತ್ತೂರಿನ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಆಯ್ಕೆಯಾಗಿದ್ದು, ಕೆಯ್ಯೂರಿನ ಶೀನ ಅಜಿಲ ಅವರಿಗೆ ಸಿರಿಚಾವಡಿ ತಮ್ಮನ ಪುರಸ್ಕಾರ, ಕೋಡಿಂಬಾಡಿಯ ಶ್ರೇಷ್ಠ ಆಳ್ವ ಅವರಿಗೆ ಸಿರಿಚಾವಡಿ ಬಾಲ ಪುರಸ್ಕಾರ, ವಿಜಯಕುಮಾರ್ ಭಂಡಾರಿ ಅವರಿಗೆ ಸರಿಚಾವಡಿ ಮಾಧ್ಯಮ ಪುರಸ್ಕಾರ, ತುಳುಕೂಟ (ರಿ.) ಪುತ್ತೂರು ಸಂಘಟನೆಗೆ ಸಿರಿಚಾವಡಿ ಸಂಘಟಣಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರವನ್ನು ತಮ್ಮ ಮಾತೃ ಭಾಷೆ ತುಳುವಿನಲ್ಲಿ ತಮ್ಮ ಅದ್ಭುತ ಮಾತಿನ ಶೈಲಿಯಲ್ಲಿ ವಿವರಿಸುತ್ತ.. ಸುಮಾರು 1800 ಕ್ಕಿಂತಲೂ ಹೆಚ್ಚು ತುಳು ಕಾರ್ಯಕ್ರಮಗಳನ್ನು ತುಳು ಭಾಷೆಯಲ್ಲಿ ವಿನೂತನ ಶೈಲಿಯ ನಿರೂಪಣೆಯ ಮೂಲಕ ಜನರನ್ನು ಬಡಿದೆಬ್ಬಿಸುವ ಧ್ವನಿಯೊಂದಿಗೆ ಪ್ರಸಿದ್ದಿ ಹೊಂದಿರುವ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಚಂದ್ರಹಾಸ ಶೆಟ್ಟಿ ಮತ್ತು ಸರಸ್ವತಿ ದಂಪತಿಗಳ ಸುಪುತ್ರ. 19.12. 1989 ರಲ್ಲಿ ಜನಿಸಿದ ಇವರು ತುಳುನಾಡಿನ ದೈವರಾಧನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅದರ ಜೊತೆ ಧಾರ್ಮಿಕ ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇವರು ಕರಾವಳಿ ಸೇರಿದಂತೆ ಸುಮಾರು 5000 ಕ್ಕಿಂತಲೂ ಅಧಿಕ ದೈವದ ಕ್ಷೇತಗಳಲ್ಲಿ ಮಧ್ಯಸ್ಥಿಕೆ ಸೇರಿದಂತೆ ದೈವಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಸಾಮಾಜಿಕ ಕಾರ್ಯಕ್ಕೆ ಸಾಮಾಜಿಕ ಬಂಧು ಎಂಬ ಹೆಗ್ಗಳಿಕೆಯು ಲಭಿಸಿದೆ. ವಿಟಿವಿ ಮಾಧ್ಯಮ ಸಂಸ್ಥೆಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡುತ್ತಾ ಉತ್ತಮ ಅತಿಥಿ ನಿರೂಪಕರಾಗಿ ಸದಾ ನಮ್ಮೊಂದಿಗೆ ಇರುವ ಆತ್ಮೀಯರಿಗೆ ಶುಭವಾಗಲಿ.

ಈ ಕಾರ್ಯಕ್ರಮದಲ್ಲಿ ಸ್ವಾಮಿಜೀ, ಜಿಲ್ಲೆಯ ಸಚಿವರು, ಶಾಸಕರ ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮವು ನೇತ್ರಾವತಿ ಸಮುದಾಯ ಭವನ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯಲ್ಲಿ ನಡೆಯಲಿದೆ.









