ಪುತ್ತೂರು: ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದ ಚಾಲನೆಯಿಂದ ಬೆಂಝ್ ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದು ದಂಪತಿಗಳಿಬ್ಬರು ಗಂಭೀರ ಗಾಯಗೊಂಡ ಘಟನೆ ಮೈಸೂರು -ಮಾಣಿ ಹೆದ್ದಾರಿಯ ಮಾಡ್ನೂರು ಗ್ರಾಮದ ಕಂಟ್ರಮಜಲು ಎಂಬಲ್ಲಿ ನಡೆದಿದೆ. ಅಪಘಾತ ನಡೆದ ನಂತರ ಕಾರು ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಳ್ತಿಗೆ ಗ್ರಾಮದ ಪೂಂದ್ರುಕೋಡಿ ನಿವಾಸಿ ಗಂಗಾಧರ ಗೌಡ ಮತ್ತು ಅವರ ಪತ್ನಿ ಹೇಮಲತಾ ಗಂಭೀರ ಗಾಯಗೊಂಡ ದಂಪತಿಗಳು. ಅಪಘಾತ ನಡೆಸಿ ಸ್ಥಳದಿಂದ ಪರಾರಿಯಾದ ಬೆಂಝ್ ಕಾರು ಪಾಂಡಿಚೇರಿ ನೋಂದಾವಣೆ ಹೊಂದಿದ್ದು, ಮಂಗಳೂರಿನ ಖ್ಯಾತ ವಕೀಲರೊಬ್ಬರದ್ದು ಎನ್ನಲಾಗಿದೆ.
ಗಂಗಾಧರ ಗೌಡರವರು ತನ್ನ ಪತ್ನಿಯನ್ನು ಸ್ಕೂಟರ್ನಲ್ಲಿ ಕುಳ್ಳಿರಿಸಿಕೊಂಡು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೆಂಝ್ ಕಾರು ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ಚಾಲನೆಯಿಂದ ಓವರ್ಟೇಕ್ ಮಾಡುವ ಭರದಲ್ಲಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಕೂಟರ್ ಸಮೇತ ದಂಪತಿಗಳಿಬ್ಬರು ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬೆಂಝ್ ಕಾರನ್ನು ವಕೀಲ ಚಲಾಯಿಸುತ್ತಿದ್ದು ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಾಹಿತಿ ಇದೆ. ಇನ್ನೂ ಖ್ಯಾತ ವಕೀಲರ ಕಾರಿಗೆ ಡ್ರೈವರ್ ಬೇರೆ ಇದ್ದಾರೆಯೇ ಎಂದು ಸಾರ್ವಜನಿಕರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದ ಚಾಲನೆಯ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.