ಪುತ್ತೂರು: ಕೆ ಎಸ್ ಆರ್ ಟಿ ಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗವು 2004ರಿಂದ ಸಾರಿಗೆ ಸಂಸ್ಥೆಯ ಉಳಿಯುವಿಗಾಗಿ ಹಲವಾರು ಕಾನೂನಾತ್ಮಕ ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ಸಂಸ್ಥೆಯ ವಿರುದ್ದ ಯಾವುದೇ ಮುಷ್ಕರವನ್ನು ಸಂಘವು ಮಾಡಿಲ್ಲ. ಕಾನೂನು ಸಮ್ಮತ ವಿಚಾರದಲ್ಲಿ ಕಾರ್ಮಿಕರಿಗೆ ಈಗ ಆಗಿರುವ ಅನ್ಯಾಯವನ್ನು ವಿರೋಧಿಸಿ ಅ.21ರಿಂದ ಕೆಎಸ್ಆರ್ ಟಿಸಿ ಪುತ್ತೂರು ವಿಭಾಗ ಕಚೇರಿಯ ಮುಂದೆ ಸಂಘದ ಸದಸ್ಯರು ಕಪ್ಪುಪಟ್ಟಿ ಧರಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಗಿರೀಶ್ ಮಳಿ ಹೇಳಿದರು.
ಅವರು ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯ ಅಧಿಕಾರಿಗಳಿಂದ ತೊಡಗಿ ಸಾಮಾನ್ಯ ಕಾರ್ಮಿಕರವರೆಗೆ ಅಗಸ್ಟ್ ತಿಂಗಳ ಅರ್ಧ ವೇತನ ಪಾವತಿಯಾಗಿದೆ. ಸೆಪ್ಟೆಂಬರ್ ತಿಂಗಳ ವೇತನ ಪಾವತಿಯಾಗಿಲ್ಲ. ನಿವೃತ್ತ ನೌಕರರ ಗ್ರಾಜ್ಯುವಿಟಿ ಪಾವತಿಯಾಗಿಲ್ಲ, ಭವಿಷ್ಯ ನಿಧಿ ಪಾವತಿಯಾಗಿಲ್ಲ ಈ ವಿಚಾರವಾಗಿ ಸಂಘವು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಪುತ್ತೂರು ಶಾಸಕರಿಗೆ ಮನವಿ ಮಾಡಿದೆ ಎಂದರು.
ನೌಕರರ ವೇತನ ಪಾವತಿ ವಿಳಂಬ ಸಹಿತ ಎಲ್ಲಾ ಸಮಸ್ಯೆಗಳಿಗೂ ಕೆಎಸ್ಆರ್ಟಿಸಿಯ ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿದ ಶ್ರೀಗಿರೀಶ್ ಮಳಿ ಸ್ವಯಂ ನಿವೃತ್ತಿಪಡೆದ ನೌಕರರ ನಿವೃತ್ತಿ ನಂತರದ ಯಾವುದೇ ಪರಿಹಾರವನ್ನು ಇಲ್ಲಿಯವರೆಗೆ ಪಾವತಿಸಲಿಲ್ಲ. ಕಾರ್ಮಿಕರ ಬದುಕಿನೊಂದಿಗೆ ಕೇಂದ್ರ ಕಚೇರಿಯ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾನೂನು ಸಮ್ಮತ ವಿಚಾರದಲ್ಲಿ ಕಾರ್ಮಿಕರಿಗೆ ತೊಂದರೆಯಾದಾಗ ಸಂಬಂಧಿತ ಅಧಿಕಾರಿಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪದ್ಧತಿ ಸಂಘದ್ದಾಗಿರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕರು ಸಂಬಳಕ್ಕಾಗಿ ಪರದಾಡುವುದು. ಅಂತೆಯೇ, ನಿವೃತ್ತ ನೌಕರರು ತಮ್ಮ ಗ್ರಾಚ್ಯುಟಿಗಾಗಿ (ಉಪಾಧನ) ಅಲೆದಾಡುವ ಮತ್ತು ಸ್ವಯಂ ನಿವೃತ್ತಿ ಪಡೆದ ನೌಕರರು ಕೂಡ ತಮಗೆ ಸಲ್ಲಬೇಕಾದ ಸವಲತ್ತುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಬಂದೊದಗಿಸುವುದು ಖೇದಕರ ವಿಚಾರವಾಗಿರುತ್ತದೆ.
ಮೇಲಿನ ವಿಚಾರದ ಬಗ್ಗೆ ಸಭೆ ಸೇರಿದ ಸಂಘವು ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯ ಪೂರೈಸಿದ್ದರೂ ಜೀವನ ನಿರ್ವಹಣೆಗಾಗಿ ಕಾರ್ಮಿಕರು ಒದ್ದಾಡುತ್ತಿರುವುದನ್ನು ಮನಗಂಡು ಈ ಬಗ್ಗೆ ಕಾನೂನು ಸಮ್ಮತ ಹೋರಾಟ ನಡೆಸುವರೇ ತೀರ್ಮಾನಿಸಿದ್ದಾಗಿರುತ್ತದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರು ಸಚಿವರು ಹಾಗೂ ಪುತ್ತೂರಿನ ಮಾನ್ಯ ಶಾಸಕರಲ್ಲಿ ಚರ್ಚಿಸಿದಂತೆ ದ.ಕ. ಜಿಲ್ಲಾ ಎಲ್ಲಾ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇವೆ.
ಅ. 21ರಿಂದ ನಡೆಯುವ ಅನಿರ್ಧಿಷ್ಟಾವಧಿ ಮೌನ ಪ್ರತಿಭಟನೆಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದಿದ್ದಲ್ಲಿ ಅ. 25ರಿಂದ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ ಸದಸ್ಯರು ಅಮರಣಂತ ಉಪವಾಸವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿದೆ.ಈಗಾಗಲೇ ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಈ ವಿಚಾರವಾಗಿ ಅವರು ಸರಕಾರದ ಮೇಲೆ ಒತ್ತಡ ಹಾಕುವ ಭರವಸೆ ಸಂಘಕ್ಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ. ರಾಮಕೃಷ್ಣ, ಪ್ರಧಾನ ವಕ್ತಾರ ಶಾಂತರಾಮ ವಿಟ್ಲ, ರಾಜ್ಯ ಕಾರ್ಯದರ್ಶಿ ವೆಂಕಟರಮಣ ಭಟ್, ಪುತ್ತೂರು ಘಟಕದ ಅಧ್ಯಕ್ಷ ಎಂ. ವಿಶ್ವನಾಥ ರೈ ಉಪಸ್ಥಿತರಿದ್ದರು.