ಪುನೀತ್ ರಾಜ್ಕುಮಾರ್ ಅವರು ನಟನಾಗಿ ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ನಿರ್ಮಾಪಕನಾಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಅವರು ಮಾಡಿದ್ದ ಸಾಮಜಿಕ ಕೆಲಸಗಳು ಹಲವು. ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ.
ಪುನೀತ್ ರಾಜ್ಕುಮಾರ್ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅನೇಕರಿಗೆ ಮಾದರಿ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ಬದುಕು ಕಟ್ಟಿಕೊಂಡಿದ್ದರು. ಆದರೆ, ಈಗ ಅಪ್ಪು ಇಲ್ಲ ಎಂಬ ನೋವು ಅನೇಕರನ್ನು ಬಹುವಾಗಿ ಕಾಡುತ್ತಿದೆ. ಪುನೀತ್ ನಿಧನ ಹೊಂದಿ ಒಂದು ವರ್ಷ ಕಳೆಯುತ್ತಾ ಬಂದರೂ ಅವರ ಅಗಲಿಕೆಯ ನೋವು ಕಡಿಮೆ ಆಗಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಈಗ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗಿದ್ದ ಸ್ಟಾರ್ ನಟನಿಗೆ ಸರ್ಕಾರ ವಿಶೇಷವಾಗಿ ಗೌರವ ಸೂಚಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಪುನೀತ್ ರಾಜ್ಕುಮಾರ್ ಅವರು ನಟನಾಗಿ ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ನಿರ್ಮಾಪಕನಾಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಅವರು ಮಾಡಿದ್ದ ಸಾಮಜಿಕ ಕೆಲಸಗಳು ಹಲವು. ‘ಕನ್ನಡದ ಕೋಟ್ಯಧಿಪತಿ’ ಶೋಗೆ ಬಂದ ಸ್ಪರ್ಧಿಗೆ ಪುನೀತ್ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಿದ್ದರು. ಹೀಗೆ ಅವರ ಒಳ್ಳೆಯ ಗುಣ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣದಿಂದ ಪುನೀತ್ ಅವರಿಗೆ ಸರ್ಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’ ಎಂದು ಸುನೀಲ್ ಟ್ವೀಟ್ ಮಾಡಿದ್ದಾರೆ.