ಪುಷ್ಪಾ ಸಿನಿಮಾ ರೀತಿಯಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿ ಸ್ಮಗ್ಲರ್ಸ್ ವಿಫಲವಾಗಿ ಪೊಲೀಸರ ವಾಟೆಂಡ್ ಲಿಸ್ಟ್ಗೆ ಸೇರಿದ ಘಟನೆ ನಡೆದಿದೆ. 650 ಕ್ಕೂ ಅಧಿಕ ಕೆಜಿಯ ಕೋಟ್ಯಾಂತರ ರೂಪಾಯಿ ಮೌಲ್ಯ ದ ರಕ್ತಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ನೀಲಗಿರಿ ತೋಪಿನಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ನೀಲಗಿರಿ ಮರಗಳ ನಡುವೆ ಭೂಮಿಯಲ್ಲಿ ರಕ್ತಚಂದನ ಬಚ್ಚಿಟ್ಟು ಖದೀಮರು ಸ್ಮಗ್ಲಿಂಗ್ ಮಾಡಲು ಯತ್ನಿಸಿದ್ದಾರೆ.
ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕೆಜಿಗಟ್ಟಲೆ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ನೆರೆಯ ಆಂಧ್ರದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತಂದಿದ್ದು , ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಪರಾರಿ ಆಗಿದ್ದಾರೆ. ರಕ್ತಚಂದನ ಬಚ್ಚಿಟ್ಟಿದ್ದ ಅಯಾಜ್ ಖಾನ್, ಜಮೀರ್ ಮತ್ತು ಇರ್ಪಾನ್ ಎಸ್ಕೆಪ್ ಆಗಿದ್ದು, ಹೀಗಾಗಿ ಮೂವರ ವಿರುದ್ಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ . ಹೊಸಕೋಟೆ ಪೊಲೀಸರಿಂದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆದಿದೆ.