ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಆವಲಹಳ್ಳಿ ಮೂಲದ ಅಜಯ್ ಕುಮಾರ್, ಯಲಹಂಕ ಮೂಲದ ಜ್ಞಾನಮೂರ್ತಿ, ಮಾಲೂರು ಮೂಲದ ರವಿಚಂದ್ರ, ಮುರುಗೇಶ್, ಮುನಿರಾಜು, ಮತ್ತು ಶಿವಮೊಗ್ಗ ಮೂಲದ ಕುಮಾರಸ್ಚಾಮಿ ಎಂದು ತಿಳಿದುಬಂದಿದೆ.
ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸರ್ಕಾರಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಲಕ್ಷಾಂತರ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಉದ್ಯೋಗದ ಸರ್ಟಿಪೀಕೆಟ್ ಕೊಡಿಸುವುದಾಗಿ ಹೇಳುತ್ತಿದ್ದರು.
ರಸ್ತೆ ಮಧ್ಯೆ ಪೊಲೀಸರಂತೆ ವಾಕಿಟಾಕಿ, ಮಿಲ್ಟ್ರಿ ಕ್ಯಾಪ್ ಮತ್ತು ಲಾಠಿ ತೆಗೆದುಕೊಂಡು ಬಂದು ಬೆದರಿಸಿ, ಹಣ, ಮೊಬೈಲ್ ಕಿತ್ತುಕೊಳ್ಳುತ್ತಿದ್ದರು. ಕಳೆದ ವಾರ ಉತ್ತರ ಕರ್ನಾಟಕ ಮೂಲದ ಯುವತಿಗೆ ನೌಕರಿ ಕೊಡಿಸುವುದಾಗಿ ಕರೆಸಿ ₹ 10 ಲಕ್ಷ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಕಾರು, ವಾಕಿಟಾಕಿ, 6 ಮೊಬೈಲ್, ಮಿಲಿಟರಿ ಟೋಪಿ, ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.