
ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಗುರುವಾರ ನಾಲ್ಕು ದಿನಗಳ ಪ್ರವಾಸಕ್ಕಾಗಿ ದೆಹಲಿಗೆ ಬಂದಿರುವ ಮಮತಾ ಆಗಸ್ಟ್ 7ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನೀತಿ ಆಯೋಗದ ಸಭೆಗೆ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ವರ್ಷ ಮಮತಾ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಪಶ್ಚಿಮ ಬಂಗಾಳಕ್ಕೆ ಬರಬೇಕಿದ್ದ ಜಿಎಸ್ಟಿ ಬಾಕಿ ಸೇರಿದಂತೆ ಹಲವಾರು ವಿಷಯಗಳನ್ನು ಮಮತಾ ಚರ್ಚಿಸಲಿದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿದ್ದವು.

ಪ್ರಧಾನಿ ಮೋದಿ ಕಚೇರಿ ನರೇಂದ್ರ ಮೋದಿ ಮತ್ತು ಮಮತಾ ಭೇಟಿಯ ಫೋಟೋ ಟ್ವೀಟ್ ಮಾಡಿದೆ. ಉಪರಾಷ್ಟ್ರಪತಿ ಚುನಾವಣೆ ನಾಳೆ ನಡೆಯಲಿದ್ದು ಅದಕ್ಕೆ ಒಂದು ದಿನ ಮುಂಚೆ ಮಮತಾ-ಮೋದಿ ಭೇಟಿ ಹೆಚ್ಚಿನ ಪ್ರಾಧಾನ್ಯತೆ ವಹಿಸಿದೆ. ಮೋದಿ ಭೇಟಿ ನಂತರ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದು ರಾಷ್ಟ್ರಪತಿಯವರು ಭೇಟಿಯ ಫೋಟೋ ಟ್ವೀಟ್ ಮಾಡಿದ್ದಾರೆ.

ಎಂಜಿಎನ್ಆರ್ಇಜಿಎ, ಪಿಎಂ ಆವಾಸ್ ಯೋಜನೆ ಮತ್ತು ಪಿಎಂ ಗ್ರಾಮೀಣ ಸಡಕ್ ಯೋಜನೆ ಸೇರಿದಂತೆ ಯೋಜನೆಗಳ ಅನುಷ್ಠಾನಕ್ಕಾಗಿ ಪಶ್ಚಿಮ ಬಂಗಾಳಕ್ಕೆ ನೀಡಬೇಕಾದ ಹಣವನ್ನು ತುರ್ತು ಬಿಡುಗಡೆ ಮಾಡುವಂತೆ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ಈ ಯೋಜನೆಗಳ ಮೇಲಿನ ಬಾಕಿ ಮೊತ್ತ ಸುಮಾರು 17996 ಕೋಟಿ ರೂಪಾಯಿ ಎಂದು ಪಶ್ಚಿಮ ಬಂಗಾಳ ಸಿಎಂ ಪ್ರಧಾನಿಗೆ ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ, ಮತ್ತು ಯಾಸ್ ಮತ್ತು ಅಂಫಾನ್ನಂತಹ ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಿಂದ ಉಂಟಾಗುವ ತುರ್ತು ಸಂದರ್ಭಗಳನ್ನು ನಿಭಾಯಿಸಲು ರಾಜ್ಯ ಹೆಚ್ಚಿನ ಖರ್ಚು ಮಾಡಬೇಕಾಗಿ ಬಂದಿತ್ತು. ಇದಕ್ಕಾಗಿ ಕೇಂದ್ರದಿಂದ ಹಣ ಸಿಗಲಿಲ್ಲ ಎಂದು ಮಮತಾ ಬ್ಯಾನರ್ಜಿ ಮೋದಿಯವರಿಗೆ ಸಲ್ಲಿಸಿದ ಪತ್ರದಲ್ಲಿ ಹೇಳಿರುವುದಾಗಿ ರಿಪಬ್ಲಿಕ್ ವರ್ಲ್ಡ್ ಡಾಟ್ ಕಾಂ ವರದಿ ಮಾಡಿದೆ.

ಪ್ರಧಾನ ವಲಯಗಳ ಖಾತೆಯಲ್ಲಿ ರೂ.1,00,968.44 ಕೋಟಿಯಷ್ಟು ದೊಡ್ಡ ಮೊತ್ತವು ಬಾಕಿ ಉಳಿದಿರುವುದರಿಂದ, ರಾಜ್ಯ ಸರ್ಕಾರವು ವ್ಯವಹಾರಗಳನ್ನು ನಡೆಸುವುದು ಮತ್ತು ರಾಜ್ಯದ ಜನರನ್ನು ನೋಡಿಕೊಳ್ಳುವುದು ಅತ್ಯಂತ ಕಷ್ಟಕರವಾಗುತ್ತಿದೆ. ಸಾರ್ವಜನಿಕ ಸೇವೆಗಳ ಹಿತದೃಷ್ಟಿಯಿಂದ ರಾಜ್ಯಕ್ಕೆ ನೀಡಬೇಕಾದ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಸಂಬಂಧಪಟ್ಟ ಸಚಿವಾಲಯಗಳಿಗೆ ಹೇಳುವಂತೆ ಮಮತಾ ಮೋದಿಯವರಲ್ಲಿ ಒತ್ತಾಯಿಸಿದ್ದಾರೆ.
