ಬೆಂಗಳೂರು: ಜುಲೈನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿದ್ದ ಪ್ರವಾಹದಲ್ಲಿ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಎನ್ಡಿಆರ್ ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ನಿಗದಿ ಪಡಿಸಿದ ಮೊತ್ತಕ್ಕಿಂತ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರ ಈಗ ಸೇರಿಸಿ ನೀಡುವುದಾಗಿ ಘೋಷಿಸಿದೆ. ಪ್ರವಾಹದ ನೀರು ಮನೆಗೆ ನುಗ್ಗಿ ಆಹಾರ, ಗೃಹಪಯೋಗಿ ವಸ್ತುಗಳಿಗೆ ಹಾನಿ ಉಂಟಾಗಿರುವವರಿಗೆ ಪರಿಹಾರ ಮೊತ್ತವನ್ನು 3,800 ರೂಪಾಯಿಯಿಂದ 10 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಮನೆ ಶೇಕಡಾ 75ಕ್ಕಿಂತ ಹೆಚ್ಚು ಹಾನಿಗೀಡಾದವರಿಗೆ 95,100 ರೂಪಾಯಿ ಬದಲು 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಮನೆ ಶೇಕಡಾ 75ರಷ್ಟು ಹಾನಿಗೆ ಒಳಗಾಗಿದ್ದು, ಅದನ್ನು ಕೆಡವಿ ಮತ್ತೆ ನಿರ್ಮಿಸಬೇಕು ಎಂಬ ಸ್ಥಿತಿ ಇದ್ರೆ, ಅದಕ್ಕೂ 5 ಲಕ್ಷ ರೂಪಾಯಿ. ಹೆಚ್ಚು ದುರಸ್ಥಿ ಮಾಡಿಸಿಕೊಳ್ಳುವಷ್ಟು ಮನೆ ಹಾನಿಗೀಡಾಗಿದ್ರೆ 3 ಲಕ್ಷ ರೂಪಾಯಿ, ಮನೆ ಅಲ್ಪ ಸ್ವಲ್ಪ ಹಾನಿಗೀಡಾಗಿದ್ರೆ 5200 ರೂಪಾಯಿ ಬದಲು 50 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.