ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಬಳಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯೊಬ್ಬಳು ಪ್ರೀತಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅದೇ ಚಿಂತೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಲ್ವಾಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ವಂಡ್ಸೆಯ ನಿವಾಸಿ ರಿಜ್ವಾನ್ (26) ಎಂದು ತಿಳಿಯಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಯುವಕ ಕಳೆದ 3 ವರ್ಷಗಳಿಂದ ಗಂಗೊಳ್ಳಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಆದರೆ ಯುವತಿಯು ಇತ್ತೀಚೆಗೆ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ.ಇದರಿಂದ ಮಾನಸಿಕವಾಗಿ ಕುಗ್ಗಿ ಹೋದ ರಿಜ್ವಾನ್ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ, ಆಗ ಮನೆಯವರೆಲ್ಲ ಸಮಾಧಾನಪಡಿಸಿದ್ದರು.
ನಂತರ ಆತ ಉದ್ಯೋಗ ಮಾಡುತ್ತಿದ್ದ ಸಂಸ್ಥೆಯ ಮಾಲಕ ಇರ್ಫಾನ್ ಅವರು ರಿಜ್ವಾನ್ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಅಂದು ರಾತ್ರಿ ಆತ ಬಾಡಿಗೆ ಮನೆಯಲ್ಲಿ ಮಲಗಿದ್ದಾನೆ. ಆದರೆ ಬೆಳಗ್ಗೆ 7.45ರ ಸುಮಾರಿಗೆ ನೋಡಿದಾಗ ರಿಜ್ವಾನ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.