ಬಂಟ್ವಾಳ: ಅಕ್ರಮವಾಗಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ದಾಂದಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಬಿ.ಸಿ ರೋಡ್ ನಲ್ಲಿ ನಡೆದಿದೆ. ಬಿ.ಸಿ ರೋಡ್ ನ ಜೆ.ಎಂ ಟವರ್ಸ್ ಗಾಣದ ಪಡ್ಪು ಎಂಬಲ್ಲಿ ಕೈರಾ ಡಿಸ್ಟ್ರಿಬ್ಯೂಟರ್ ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಈ ಅಂಗಡಿಯ ಮಾಲಿಕ ಅಜ್ಜಿನಡ್ಕ ನಿವಾಸಿ ಮಹಮ್ಮದ್ ಅಶ್ರಫ್ ಎನ್ನಲಾಗಿದೆ. ಇವರು ಕೆಲದಿನಗಳಿಂದ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು ಅಂಗಡಿಯ ವ್ಯಾವಹಾರವನ್ನು ರಮ್ಲಾನ್ ರಮೀಝ್ ಎಂಬವರು ನೋಡಿಕೊಂಡಿದ್ದರು.
ಆರೋಪಿಗಳಾದ ವಿಕ್ಟರ್ ಡಿಸೋಜ, ಮರ್ತಾ ಡಿಸೋಜ, ಜೋಸ್ಲನ್ ಡಿಸೋಜ, ಪಿಟರ್ ಡಿಸೋಜ, ಇಸ್ಮಾಯಿಲ್ ಕೈಕಂಬ ಹಾಗೂ ಇನ್ನೂ ಐದಾರು ಮಂದಿ ಬೋಲೆರೋ ಜಿಪ್ ಹಾಗೂ ಕೆ.ಟಿ.ಎಂ350 ಬೈಕ್, ರಿಕ್ಷಾದಲ್ಲಿ ಬಂದು ಅಂಗಡಿಗೆ ನುಗ್ಗಿ ಅಶ್ರಫ್ ಎಲ್ಲಿ ಎಂದು ಜೋರಾಗಿ ಬೆದರಿಸಿ ರಮ್ಲಾನ್ ರಮೀಝ್ ಎಂಬರನ್ನು ಅಂಗಡಿಯ ಒಳಗೆ ಕೂಡಿ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಆರೋಪಿಯಾದ ಇಸ್ಮಾಯಿಲ್ ಕೈಕಂಬ “ರಿಕ್ಷಾದಲ್ಲಿ2-3 ತಲವಾರು ಇದೇ ಅದನ್ನು ತನ್ನಿ ಇವರನ್ನು ಇಲ್ಲಿಯೇ ಮುಗಿಸಿ ಬಿಡುವ” ಎಂದು ಇತರೆ ಆರೋಪಿಗಳಿಗೆ ಹೇಳಿದ್ದಾನೆ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ. ಅಂಗಡಿಯ ಹೊರಗೆ ಇಟ್ಟಿರುವ 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಬಲವಂತವಾಗಿ ಆರೋಪಿಗಳು ರಿಕ್ಷಾದಲ್ಲಿ ತುಂಬಿಸಿಕೊ0ಡು ಹೋಗಿದ್ದಾರೆ ಎಂದು ರಮ್ಲಾನ್ ರಮೀಝ್ ತಿಳಿಸಿದ್ದಾರೆ.